ರಾಜಮೌಳಿಗೆ ಮತ್ತೆ ತಲೆನೋವು

ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಸಿನಿಮಾ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್ ಮೆಟ್ಟಿಲೇರಿದ್ದು, ಚಿತ್ರತಂಡಕ್ಕೆ ತಲೆನೋವಾಗಿ ಕಾಡಿದ್ದಾಳೆ.

ಆಂಧ್ರಪ್ರದೇಶದ ವಿದ್ಯಾರ್ಥಿನಿ ಅಲ್ಲೂರಿ ಸೌಮ್ಯ ಎನ್ನುವವರು ತೆಲಂಗಾಣ ಹೈಕೋರ್ಟ್ ನಲ್ಲಿ ಬಹುನಿರೀಕ್ಷಿತ ಚಿತ್ರ ‘ ಆರ್ ಆರ್ ಆರ್ ‘ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾಳೆ. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮ್ಮರಂ ಭೀಮ್ ಈ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಈ ಸಿನಿಮಾದಲ್ಲಿ ತಿರುಚಲಾಗಿದೆ. ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು. ಈ ಸಿನಿಮಾದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾಳೆ.

ಕೋವಿಡ್-19 ಪರಿಣಾಮ ಜನವರಿ ಏಳರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಮುಂದೂಡಲಾಗಿದೆ. ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಆಗಿರುವ ಕಾರಣ ಚಿತ್ರತಂಡಕ್ಕೆ ಹೊಸ ತಲೆನೋವು ಉಂಟಾಗಿದೆ.

‘ಆರ್‌ಆರ್‌ಆರ್‌’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಸಾಕಷ್ಟು ಕುತೂಹಲ ಉಂಟು ಮಾಡಿದೆ. ಚಿತ್ರದಲ್ಲಿ ಆಲಿಯಾ ಭಟ್, ಅಜಯ್​ ದೇವಗನ್​ ಸಹ ನಟಿಸಿದ್ದಾರೆ. ಹಲವು ರಾಜ್ಯಗಳಲ್ಲಿ ಥಿಯೇಟರ್ ಬಂದ್ ಆಗಿರುವ ಕಾರಣ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ.

ತೆರೆಯ ಮೇಲೆ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಇನ್ನಷ್ಟು ಕಾಯಬೇಕಿದೆ. ಕೋವಿಡ್ ಆರ್ಭಟ ತಗ್ಗಿದ ನಂತರ ಮುಂದಿನ ಕೆಲ ದಿನಗಳಲ್ಲಿ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!