ದರ್ಶನ್, ನನ್ನ ಸ್ನೇಹ ಚೆನ್ನಾಗಿದೆ: ಉಮಾಪತಿ

ಬೆಂಗಳೂರು: ನಾನು ಹಾಗೂ ದರ್ಶನ್ ಮೊದಲಿನಂತೆಯೇ ಇದ್ದೇವೆ. ಅವರ ಜೊತೆ ಕರೆ ಮಾಡಿ ಮಾತನಾಡಿದ್ದೇನೆ. ನಮ್ಮಿಬ್ಬರ ನಡುವಿನ ಸ್ನೇಹ ಚೆನ್ನಾಗಿದೆ ಎಂದು ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು,  ನನಗೆ ಯಾರ ಬಗ್ಗೆಯೂ ಅನುಮಾನ ಇಲ್ಲ. ಈ ವಂಚನೆ ಪ್ರಕರಣ ಬಯಲಿಗೆ ಎಳೆದಿದ್ದೇ ನಾನು. ಈ ಪ್ರಕರಣದ ಪ್ರತಿ ವಿಚಾರವನ್ನೂ ದರ್ಶನ್ ಅವರಿಗೆ ತಿಳಿಸಿದ್ದೇನೆ. ಶೀಘ್ರವೇ ಈ ಪ್ರಕರಣಕ್ಕೆ ತೆರೆ ಬೀಳಲಿದೆ ಎಂದು ಅವರು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ ಕಳೆದ ಕೆಲವು ದಿನಗಳಿಂದ ದರ್ಶನ್ ಹಾಗೂ ಉಮಾಪತಿ ಅವರ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿದೆ ಎಂದೂ ಹೇಳಲಾಗುತ್ತಿತ್ತು. ಆದರೆ ಈ ಎಲ್ಲ ಅಂತೆಕಂತೆಗೆ ಉಮಾಪತಿ ಅಂತ್ಯ ಹಾಡಿದ್ದಾರೆ.
ಆರೋಪಿ ಅರುಣಕುಮಾರಿ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು. ಯಾಕೆ ಈ ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ನಟ ದರ್ಶನ್ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದರ್ಶನ್, ಚೆಂಡು ಈಗ ಉಮಾಪತಿ ಅಂಗಳದಲ್ಲಿದೆ. ಗೋಲು​ ಹೊಡೆಯುವುದು ಅವರಿಗೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ಹೇಳಿದ್ದರು. ಪ್ರಕರಣದಲ್ಲಿ ಉಮಾಪತಿ ಅವರ ಹೆಸರೇ ಕೇಳಿ ಬರುತ್ತಿದೆ. ಉಮಾಪತಿ ಹಾಗೂ ನನ್ನ ನಡುವೆ ಯಾವುದೇ ವೈಮನಸ್ಸಿಲ್ಲ. ನಾನೀಗಲೆ ಅವರು ನಿರ್ಮಾಣ ಮಾಡುವ ಎರಡು ಚಿತ್ರಗಳಿಗೆ ಡೇಟ್ ಕೊಟ್ಟಿದ್ದೇನೆ ಎಂದಿದ್ದರು.

ಮೈಸೂರು ಪೊಲೀಸರು ನಕಲಿ ಬ್ಯಾಂಕ್ ಅಧಿಕಾರಿ ಅರುಣಕುಮಾರಿ, ಮಧುಕೇಶವ ಹಾಗೂ ನಂದೀಶ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ದರ್ಶನ್ ಅವರ ಹೆಸರು ಬಳಿಸಿಕೊಂಡು 25 ಕೋಟಿ ವಂಚನೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಮೈಸೂರಿನಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!