ಮನೆ ತಾರಸಿ ಮೇಲೆಯೇ ಸಾವಯವ ಕೃಷಿ ; ಶೋಭಾ ಆನಂದ ಅವರ ವಿನೂತನ ಪ್ರಯೋಗ

ನಗರಕ್ಕೆ ಬಂದ ಮೇಲೆ ಹಳ್ಳಿ ಜೀವನ ಮಿಸ್ ಆಯ್ತು ಅನ್ನೋದು ನಗರವಾಸಿಗಳ ಸಾಮಾನ್ಯ ಮಾತು ಆದರೆ, ಸಿಟಿ ನಡುವಲ್ಲಿ ಇದ್ದುಕೊಂಡು ಹಳ್ಳಿ ಜೀವನ ಮಾಡಬಹುದು ಅಂದರೇ ನೀವು ನಂಬುತ್ತೀರಾ..? ನಂಬಲೇ ಬೇಕು. ಹೌದು ನಾಗಮಂಗಲ ತಾಲೂಕಿನ ಬೆಟ್ಟದಕೋಟೆ ಊರಿನವರಾದ ಶೋಭಾ ಆನಂದ ಅವರು ಬೆಂಗಳೂರು ನಗರದಲ್ಲಿ ಕೃಷಿ ಮಾಡಿ ಪ್ರಗತಿಪರ ಕೃಷಿಕರಾಗಿ ಹೊರ ಹೊಮ್ಮಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಮನೆಯ ತಾರಸಿಯಲ್ಲಿ ಅಪ್ಪಟ ಸಾವಯವ ಕೃಷಿ ತೋಟ ಕಂಗೊಳಿಸುತ್ತಿದ್ದು, ನಗರದ ನಡುವಿನಲ್ಲಿದ್ದುಕೊಂಡು ಕೃಷಿ ಕ್ರಾಂತಿ ಮಾಡುತ್ತಿದ್ದಾರೆ.

ಆಗಷ್ಟೇ ಹೂವಿನಿಂದ ಬೇರ್ಪಟ್ಟ ತರಕಾರಿಗಳ ಮೊಗ್ಗುಗಳು. ಎತ್ತ ಕಣ್ಣು ಹಾಯಿಸಿದರೂ ಕಾಣಸಿಗುವ ಹಸಿರ ಚಿತ್ತಾರ. ಇದು ಯಾವುದೋ ಹಳ್ಳಿಯ ದೃಶ್ಯದ ವರ್ಣನೆಯಲ್ಲ. ಬೆಂಗಳೂರು ನಗರದಲ್ಲಿರುವ ಪ್ರಗತಿಪರ ಕೃಷಿಕರಾದ ಶೋಭಾ ಆನಂದ ಅವರ ಮನೆಯ ತಾರಸಿಯಲ್ಲಿರುವ ಕೃಷಿ ತೋಟ. ಅರಸಿ ಗ್ರೂಪ್ಸ್ ನ ಮಾಲೀಕರಾದ ಶೋಭಾ ಆನಂದ ದಂಪತಿಗಳ ಮಕ್ಕಳಾದ ಅಲೋಕ ಆನಂದ ಮತ್ತು ಅರ್ಜುನ ಆನಂದ ಅವರು ಇಂಜಿನಿಯರಿಂಗ್ ಪದವಿ ಮಾಡಿಕೊಂಡು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಅರ್ಜುನ ಆನಂದ ಮತ್ತು ಮೇಘಾ ಅರ್ಜುನ ದಂಪತಿಗಳಿಗೆ ಗಂಡು ಮಗುವಾದ ಅಭಿನವ ಅರ್ಜುನ ನಿಗೊಸ್ಕರ ಶೋಭಾ ಆನಂದ ಅವರು ಮನೆ ತಾರಸಿ ಮೇಲೆಯೇ ಸಾವಯವ ಕೃಷಿ ಪ್ರಾರಂಭಿಸುತ್ತಾರೆ. ಅದಕ್ಕೆ ಅರಸಿ ಟೇರಸ್ ಗಾರ್ಡನ್ ಅಂತ ಹೆಸರಿಟ್ಟಿದ್ದಾರೆ.

ಭವಿಷ್ಯದಲ್ಲಿ ತಮ್ಮ ಪ್ರೀತಿಯ ಮೊಮ್ಮಗನಾದ ಅಭಿನವ ಆನಂದ ಅವನ ಆರೋಗ್ಯದ ಕಾಳಜಿಗಾಗಿ,ಕೆಮಿಕಲ್ ರಹಿತ ಸಾವಯವ ಆಹಾರ ಪದಾರ್ಥಗಳ ಸೇವನೆಗೊಸ್ಕರವೇ ತಯಾರಾದ ಈ ಅರಸಿ ಟೇರಸ್ ಗಾರ್ಡನ್.

ಈ ಅರಸಿ ಟೆರೇಸ್ ಗಾರ್ಡನ್ ವಿಶೇಷಗಳೇನು ಗೊತ್ತಾ?

ಶೋಭಾ ಆನಂದ ರವರ ಮನೆಯ ತಾರಸಿ ಮೇಲೆ ಅಂದವಾದ ಹಾಗೂ ಅಷ್ಟೇ ಸಮೃದ್ಧವಾದ ಅರಸಿ ಟೆರೇಸ್ ಗಾರ್ಡನ್ ನಲ್ಲಿ ಬೆಳೆಸಿಕೊಂಡಿದ್ದಾರೆ. ಪ್ರತಿನಿತ್ಯ ಮನೆಯಲ್ಲಿ ಅಡುಗೆಗೆ ಅತ್ಯಗತ್ಯವಾಗಿ ಬೇಕಾಗುವ ಈರುಳ್ಳಿ, ಟೊಮೇಟೊ, ಹಸಿರು ಮೆಣಸಿನಕಾಯಿ, ಬದನೆಕಾಯಿ, ಎಲೆ ಕೋಸು, ಮೂಲಂಗಿ, ಟೊಮೇಟೊ, ಅವರೆ, ಬಟಾಣಿ, ಕ್ಯಾರಟ್ ಮತ್ತಿತರ ಕಾಳು ತರಕಾರಿಗಳು, ಕರಿಬೇವು, ಕೊತ್ತುಂಬರಿ, ಬಸಳೆ, ಪಾಲಕ್, ಮೆಂತೆ, ಪುದೀನಾ ಸೇರಿದಂತೆ ವಿವಿಧ ಸೊಪ್ಪುಗಳನ್ನು ಬೆಳೆಯುತ್ತಾರೆ. ಇಲ್ಲಿ 52 ಬಗೆಯ ಹಣ್ಣುಗಳು , 15 ಬಗೆಯ ತರಕಾರಿಗಳು, 15 ಬಗೆಯ ಹೂವುಗಳು, 12 ವಿಧದ ಹಸಿರು ಎಲೆಗಳ ತರಕಾರಿಗಳು , 5 ವಿಧದ ಪರಿಮಳಯುಕ್ತ ಗಿಡಮೂಲಿಕೆಗಳು , 3 ವಿಧದ ಮಸಾಲ ಎಲೆಗಳು , 8 ಬಗೆಯ ಔಷಧೀಯ ಸಸ್ಯಗಳು ಪ್ರಸ್ತುತ ಅರಸಿ ಟೆರೇಸ್ ಗಾರ್ಡ್‌ನಲ್ಲಿವೆ. ಪ್ರೀತಿಯಿಂದ ಮಕ್ಕಳಂತೆ ಸಾಕಿ ಸಲುಹಿದ ತಾರಸಿ ತೋಟ ಇಂದು ಫಲ ಪುಷ್ಪದಿಂದ ತುಂಬಿ ಹೋಗಿದೆ.

ಒಬ್ಬ ಜವಾಬ್ದಾರಿಯುತ ಗೃಹಿಣಿಯ ಹೊಣೆ ಇಷ್ಟಕ್ಕೇ ಮುಗಿಯುವುದಿಲ್ಲ. ಇದಕ್ಕೂ ಮುಂದೆ ಸಾಗಿ ಇಡೀ ಕುಟುಂಬದ ಸದಸ್ಯರು ಆರೋಗ್ಯಕ್ಕೆ ಪೂರಕವಾಗಿರುವ ಆಹಾರವನ್ನೇ ಸೇವಿಸುತ್ತಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು ಕೂಡ ಒಬ್ಬ ಉತ್ತಮ ಗೃಹಿಣಿಯ ಲಕ್ಷಣ. ಹಾಗೆ ನೋಡುತ್ತಾ ಹೋದರೆ ನಗರ ಪ್ರದೇಶದಲ್ಲಿನ ಮಹಿಳೆಯರು ಈ ನಿಟ್ಟಿನಲ್ಲಿ ಜಾಗೃತರಾಗಿದ್ದಾರೆ. ಆದರೆ ಅಂಥವರ ಸಂಖ್ಯೆ ಹೆಚ್ಚೇನೂ ಇಲ್ಲ. ಮನೆಯ ಕಾಂಪೌಂಡ್ ಒಳಗೆ ಜಾಗವಿದ್ದರೆ ಅಲ್ಲಿ ಆದಷ್ಟು ಸೊಪ್ಪು, ತರಕಾರಿಗಳನ್ನು ಬೆಳೆಯುವ ಕೈತೋಟ ಮಾಡಿಕೊಂಡು, ಮನೆಯ ಅಗತ್ಯಕ್ಕೆ ಬೇಕಿರುವ ತರಕಾರಿಗಳನ್ನು ಅಲ್ಲೇ ಬೆಳೆಯುತ್ತಾರೆ. ಈ ಮೂಲಕ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿಗಳನ್ನು ತಮ್ಮ ಕುಟುಂಬಕ್ಕೆ ಉಣಬಡಿಸಿ ಆನಂದಿಸುತ್ತಾರೆ.I ಈ ಅರಸಿ ಟೇರಸ್ ಗಾರ್ಡನ್ ನ ಮೂಲ ಕರ್ತೃ ತಮ್ಮ ಪತಿಯಾದ ಆನಂದ ಅವರ ಸಹಕಾರ ಹಾಗೂ ಪ್ರೋತ್ಸಾಹ ದಿಂದ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಜನರಿಗೆ ಕಾಂಪೋಸ್ಟ್ ಜಾಗೃತಿ

ನಗರಗಳಲ್ಲಿ ಕಸದ ನಿರ್ವಹಣೆ ದೊಡ್ಡ ತಲೆನೋವು. ಅದರಲ್ಲೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಂತೂ ಅದರ ಕಷ್ಟ ಹೇಳತೀರದು. ಕಸ ಸಂಗ್ರಹ ಮಾಡುವವರು ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ಕೆಲವೊಮ್ಮೆ ನಾಲ್ಕಾರು ದಿನ ಕಸ ಸಂಗ್ರಹಿಸುವವರು ಮನೆಯತ್ತ ಸುಳಿಯುವುದಿಲ್ಲ. ಇಂಥ ಸಂದರ್ಭಗಳಲ್ಲಿ ಹಸಿ ಕಸವನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಅಸಾಧ್ಯ. ಇದಕ್ಕೆ ಪರಿಹಾರವೇ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಸುವುದು. ಆ ವೇಳೆಗಾಗಲೇ ಮನೆಯಲ್ಲಿ ಸಂಗ್ರಹವಾಗುವ ಹಸಿ ಕಸದಿಂದ ಕಾಂಪೋಸ್ಟ್ ತಯಾರಿಸುತ್ತಿದ್ದ ಶೋಭಾ ಆನಂದ,  ಅವರು  ಮನೆಯಲ್ಲೇ ಸಣ್ಣ ಕೈ ತೋಟ ಬೆಳೆಸಿ ಆ ಗೊಬ್ಬರವನ್ನು ಅಲ್ಲಿನ ಗಿಡಗಳಿಗೆ ಹಾಕುತ್ತಾರೆ.

ಅರಸಿ ಟೇರಸ್ ಗಾರ್ಡನ್ ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಾ ಹಾಗಾದರೆ ಈ ಲೀಂಕ್ ನೋಡಿ :

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!