ನಿಜಕ್ಕೂ ಕಬ್ಜ ಶೂಟಿಂಗ್ ನಲ್ಲಿ ಉಪ್ಪಿಗಾಗಿದ್ದೇನು ?

ಕಬ್ಜ ಚಿತ್ರೀಕರಣದಲ್ಲಿ ಉಪೇಂದ್ರಗೆ ಆಗಿದ್ದೇನು ?
ತಲೆಗೆ ಆದ ಪೆಟ್ಟು, ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂಥದ್ದಾ?

ಸಿನಿಮಾಗಳ ಚಿತ್ರೀಕರಣದ ಮೇಲೆ ಅದರಲ್ಲೂ ಆಕ್ಷನ್ ಸನ್ನಿವೇಶಗಳ ವೇಳೆ ನಾಯಕ ನಟರಿಗೆ ಏಟು ಬೀಳುವುದು ಸಹಜ. ಗಂಧದ ಗುಡಿ ಚಿತ್ರದ ಚಿತ್ರೀಕರಣ ವೇಳೆಯಲ್ಲಿ ಡಾ. ರಾಜ್ ಕುಮಾರ್ ಅವರಿಂದ ಹಿಡಿದು, ಲಾಕಪ್ ಡೆತ್ ಚಿತ್ರೀಕರಣದ ವೇಳೆ ಸಾಹಸ ಕಲಾವಿದರಿಗೆ ಆದ ಅಪಘಾತದಿಂದ ಹಿಡಿದು, ಇದು ಇತ್ತೀಚಿನವರೆಗೂ ಕಾಮನ್ ಆಗಿದೆ. ಈಗ ನಟ ಉಪೇಂದ್ರ ಅವರ ಸರದಿ.

ಆರ್ ಚಂದ್ರು ನಿರ್ದೇಶನದ ಕಬ್ಜ, ಸ್ಯಾಂಡಲ್ ವುಡ್ ನಲ್ಲಿ ಸದ್ಯದ ಟ್ರೆಂಡ್ ನಲ್ಲಿ ಸದ್ದು ಮಾಡುತ್ತಿರುವ ಬಿಗ್ ಬಜೆಟ್ ಚಿತ್ರ. ಮತ್ತು ಬಿಗ್ ಸ್ಟಾರ್ ಚಿತ್ರ ಕೂಡಾ ಹೌದು. ರಿಲಯ್ ಸ್ಟಾರ್ ಉಪೇಂದ್ರ ಅವರ ನಾಯಕತ್ವದ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡಾ ವಿಶೇಷ ಪಾತ್ರದಲ್ಲಿ ನಟಿಸುತ್ತಿರೋದು ಇನ್ನೊಂದು ವಿಶೇಷ.

ಚಂದ್ರು ಅವರ ನಿರ್ದೇಶನದಲ್ಲಿ ಈಗಾಗಲೇ ಬಹುತೇಕ ಪಾಲು ಚಿತ್ರೀಕರಣ ಮುಗಿಸಿರುವ ಕಬ್ಜ ಚಿತ್ರದ ಆಕ್ಷನ್ ಸನ್ನಿವೇಶಗಳ ಚಿತ್ರಣ ಈಗ ಆಗುತ್ತಿದೆ. ಬೆಂಗಳೂರು ನಗರದ ಮಿನರ್ವ ಮಿಲ್ ಲೊಕೇಶನ್ ನಲ್ಲಿ ಈ ಆಕ್ಷನ್ ಸನ್ನಿವೇಶದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಸಹನಟನೊಬ್ಬ ಬೀಸಿದ ರಾಡ್ ಆಕಸ್ಮಿಕವಾಗಿ ಉಪೇಂದ್ರ ಅವರ ತಲೆಗೆ ತಗುಲಿದೆ. ಅಂಡರ್ ವರ್ಲ್ಡ್ ಹಿನ್ನೆಲೆ ಇರುವ ಈ ಚಿತ್ರದ ಫೈಟಿಂಗ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಮಿನರ್ವ ಮಿಲ್ ನಲ್ಲಿ ಭರ್ಜರಿ ಸೆಟ್ ಹಾಕಲಾಗಿತ್ತು. ಸಾಹಸ ನಿರ್ದೇಶಕ ರವಿವರ್ಮ ಅವರ ನೇತೃತ್ವದಲ್ಲಿ ಈ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಈ ಅವಘಡ ನಡೆದಿದೆ. ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಆರ್ ಚಂದ್ರು ಅವರು, ಮಿನರ್ವ್ ಮಿಲ್ ನಲ್ಲಿ ನಡೆಯುತ್ತಿದ್ದ ಈ ಆಕ್ಷನ್ ಸನ್ನಿವೇಶದಲ್ಲಿ ಎಲ್ಲ ರೀತಿಯ ಎಚ್ಚರಿಕೆ ವಹಿಸಿ ಚಿತ್ರೀಕರಣ ಮಾಡಲಾಗುತ್ತಿತ್ತು. ಸಹ ಸಾಹಸ ಕಲಾವಿದ ಈ ಸನ್ನಿವೇಶದಲ್ಲಿ ರಾಡ್ ಬೀಸಿದಾಗ ಉಪೇಂದ್ರ ಅವರು ತಪ್ಪಿಸಿಕೊಳ್ಳಬೇಕಿತ್ತು. ಆದರೆ ಟೈಮಿಂಗ್ ವ್ಯತ್ಯಾಸದಿಂದಾಗಿ ರಾಡ್ ಬೀಸಿದಾಗ ಉಪೇಂದ್ರ ಅವರು ಸರಿಯಾದ ಸಮಯಕ್ಕೆ ತಪ್ಪಿಸಿಕೊಳ್ಳಲು ಸಮಯ ಸಿಗಲಿಲ್ಲ. ಹಾಗಾಗಿ ಅವರ ತಲೆಗೆ ಏಟು ಬಿತ್ತು. ಆದರೆ ತಲೆಗೆ ಬಿದ್ದ ಈ ಏಟಿನ ಬಗ್ಗೆ ತಲೆ ಕೆಡಿಸಿಕೊಳ್ಳದ ಉಪೇಂದ್ರ ದಿನದ ಶೂಟಿಂಗ್ ಅನ್ನು ಸಂಪೂರ್ಣವಾಗಿ ಮುಗಿಸಿಯೇ ಮನೆಗೆ ಹೋದರು ಎಂದು ಹೇಳುತ್ತಾರೆ.

ಅಲ್ಲದೆ ಚಂದ್ರು ಅವರು ಹೇಳುವಂತೆ ಉಪೇಂದ್ರ ಅವರಿಗೆ ಈಗಾಗಲೇ ಮೆಡಿಕಲ್ ಚೆಕಪ್ ಮಾಡಲಾಗಿದ್ದು, ಇದು ಗಂಭೀರವಾದ ಗಾಯ ಅಲ್ಲ ಎಂಬ ರಿಪೋರ್ಟ್ ಬಂದಿದೆಯಂತೆ. ಆದರೆ ಈ ಘಟನೆಯಿಂದಾಗಿ ಉಪೇಂದ್ರ ಅವರಿಗೆ ಕೊಂಚ ರೆಸ್ಟ್ ಕೊಟ್ಟಿರುವ ಕಾರಣ ಚಿತ್ರೀಕರಣದ ವೇಳಾಪಟ್ಟಿಯಲ್ಲಿ ಕೊಂಚ ಏರುಪೇರಾಗಬಹುದು ಅಷ್ಟೇ ಎನ್ನುತ್ತಾರೆ ಚಂದ್ರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!