ವೃತ್ತಿ ಆಟೋ ಚಾಲಕ,ಸಮಾಜ ಸೇವಕ, ಶಂಕರ್‌ನಾಗ್ ಕಟ್ಟಾ ಅಭಿಮಾನಿ. ಇವರ ಹೆಸರು ’ಆಟೋ ರಾಮಣ್ಣ’. ಬಳ್ಳಾರಿ ಮೂಲದವರಾಗಿದ್ದು, ಇಂದು ಇವರದೇ ಹೆಸರಿನಲ್ಲಿ ಚಿತ್ರವನ್ನು ಸಿದ್ದಪಡಿಸಿದ್ದು ಬಿಡುಗಡೆ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ನೃತ್ಯ, ಗಾಯನ, ಸಾಹಸ, ನಿರ್ಮಾಣ, ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿರುವುದು ವಿಶೇಷ. ಇವರಿಗೆ ಸರಿಸಮನಾಗಿ ಮಹೇಂದ್ರಮನ್ನೋತ್ ಹೀರೋ ಆಗಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.

ಒಟ್ಟು ಹನ್ನೆರಡು ಹಾಡುಗಳ ಪೈಕಿ ಆರು ಗೀತೆಗಳನ್ನು ರಚಿಸಿರುವ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರು ಮಾತನಾಡುತ್ತಾ, ಗೋವಿನ ಹಾಡು ತೋರಿಸಿದ್ದರೆ ಚೆನ್ನಾಗಿರುತ್ತಿತ್ತು. ಆಟೋರಾಮುರವರು ಸಕಲಕಲಾವಲ್ಲಭ ಎನ್ನಬಹುದು. ಬಹುಮುಖ ಪ್ರತಿಭೆ. ಎಲ್ಲಾ ವಿಭಾಗಗಳಲ್ಲಿ ತನ್ನದೆ ಸಾಮರ್ಥವನ್ನು ತೋರಿಸಿದ್ದಾರೆ.

ಪೆನ್ನು, ಪೇಪರ್ ಉಪಯೋಗಿಸದೆ ಸೆಟ್ ಜಾಗದಲ್ಲೆ ಡೈಲಾಗ್,ಸನ್ನಿವೇಶಗಳನ್ನು ಸ್ಠಷ್ಟಿಸುತ್ತಿದ್ದರು. ಒಂದು ರೀತಿಯಲ್ಲಿ ಆಶು ಸಂಭಾಷಣೆ ಎನ್ನಬಹುದು. ನಾಲ್ಕು ಬಾರಿ ನೋಡಿ, ಒಂದಷ್ಟು ಸಲಹೆಗಳನ್ನು ನೀಡಿದ್ದೇನೆ. ಐದೂವರೆ ಲಕ್ಷ ಆಟೋಚಾಲಕರು ಇದ್ದು, ಇವರೆಲ್ಲರೂ ಒಂದು ಬಾರಿ ನೋಡಿದರೆ ಬಂಡವಾಳ ವಾಪಸ್ಸು ಬರುತ್ತದೆ.

ಹಾಡಿನ ಸಾಲುಗಳಿಗೆ ಗಾಯಕ ಅಜಯ್‌ವಾರಿಯರ್ ಚೆನ್ನಾಗಿ ಧ್ವನಿ ನೀಡಿದ್ದಾರೆ. ಇವರನ್ನು ಜ್ಯೂ.ಯೇಸುದಾಸ್ ಅಂತ ಕರೆಯಬಹುದು. ಇಂತಹ ಪ್ರತಿಭೆಗಳಿಗೆ ನಮ್ಮಂತವರು ಪ್ರೋತ್ಸಾಹ ನೀಡಬೇಕು. ಚಿತ್ರವು ಯಶಸ್ವಿಯಾಗಿ ಹಣ ಮಾಡಲಿ ಎಂದು ಶುಭ ಹಾರೈಸಿದರು.

ಎಲ್ಲರ ನಂತರ ಮೈಕ್ ತೆಗೆದುಕೊಂಡ ಆಟೋ ರಾಮಣ್ಣ ಎರಡು ಹಾಡುಗಳನ್ನು ಮಹೇಂದ್ರಮನ್ನೋತ್ ಅವರಿಗೆ ಚಿತ್ರೀಕರಿಸಲು ಯೋಜನೆ ಹಾಕಲಾಗಿತ್ತು. ಆದರೆ ಅವರ ಸಹಾಯ, ಶ್ರದ್ದೆ ನೋಡಿ ಆರಕ್ಕೆ ಹೆಚ್ಚಿಸಲಾಯಿತು. ಅವರು ಒನ್ ಟೇಕ್ ಕಲಾವಿದ. ಗೋವು ಹಾಡನ್ನು ತೋರಿಸಿದರೆ ಕಥ ಸಾರಾಂಶ ತಿಳಿಯುತ್ತದೆ. ಅದಕ್ಕೆ ಹಾಕಿಲ್ಲ. ನಾಯಕಿಯರು ಎಲ್ಲರೂ ಅರ್ಧದಲ್ಲಿ ಕೈಕೊಟ್ಟರು.

ಕೊನೆಗೆ ಎಂಟನೇ ನಾಯಕಿ ಯೋಗಶ್ರೀ ಚೆನ್ನಾಗಿ ನಟನೆ ಮಾಡಿದರು. ಉಳಿದಂತೆ ಮನ್‌ದೀಪ್‌ರಾಯ್, ಅಭಿನಯ, ಹೊನ್ನವಳ್ಳಿಕೃಷ್ಣ, ಲಕ್ಷೀದೇವಮ್ಮ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಹಂಪಿ, ಚಿತ್ರದುರ್ಗ, ಸಕಲೇಶಪುರ, ಚೆನ್ನೈ ಮತ್ತು ಬಾಂಬೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ದಿವ್ಯ ಸುಶ್ಮಾ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆಟೋ ರಾಮು ಮ್ಯೂಸಿಕ್ ಚಾನಲ್ ಇದೆ. ದಯವಿಟ್ಟು ಎಲ್ಲರೂ ಚಂದದಾರ ಆಗಿರಿ ಎಂದು ಸಮಾಜ ಸೇವೆ ಮಾಡುತ್ತಿರುವ ವಿವರಗಳನ್ನು ನೀಡಿದರು. ಸಂಗೀತ ನಿರ್ದೇಶಕ ರಿಷಬ್‌ರತ್ನಂ, ಗಾಯಕ ಅಜಯ್‌ವಾರಿಯರ್, ನಾಯಕಿ ಯೋಗಶ್ರೀ, ಡಿಂಗ್ರಿನಾಗರಾಜ್, ಕರವೇ ಅಧ್ಯಕ್ಷ ಶಿವರಾಮೇಗೌಡ, ಪ್ರತೀಕ್ಷ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಅಂದ ಹಾಗೇ ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲಿದ್ದಾರೆ.