ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ನಯನತಾರಾ”

ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸ, ಸೇವಂತಿ, ಸುಂದರಿ ಹೀಗೆ ವಿಭಿನ್ನ ಕಥೆಗಳು ನೋಡುಗರ ಮೆಚ್ಚುಗೆ ಪಡೆದಿವೆ. ಈ ವರ್ಣರಂಜಿತ ಗುಚ್ಛಕ್ಕೆ ವಿನೂತನ ಸೇರ್ಪಡೆ ಹೊಸ ಧಾರಾವಾಹಿ ʻನಯನತಾರಾʼ.

ತನ್ನ ಪ್ರಾಮಾಣಿಕತೆ, ನಿಷ್ಠೆ, ಸತ್ಯಸಂಧತೆ, ಮುಗ್ದತೆಯ ಮೂಲಕ ಮನಗೆಲ್ಲುವ ಸರಳ ಹುಡುಗಿ ನಯನಾ ಮತ್ತು ಅತಿಯಾಸೆ, ಭ್ರಮೆ, ಸುಳ್ಳು, ವಿಶ್ವಾಸದ್ರೋಹದ ಮೂಲಕ ಬದುಕಲ್ಲಿ ಸೋಲುವ ತಾರಾ ಈ ಇಬ್ಬರು ಅಕ್ಕತಂಗಿಯರ ಕಥೆ ʻನಯನತಾರಾʼ. ಮನೆಗೆಲಸ ಮಾಡಿಕೊಂಡು ತಂಗಿ ತಾರಾಳನ್ನು ಓದಿಸುವ, ಅವಳ ಮದುವೆ ಮಾಡಿ ದಡ ಸೇರಿಸಲು ಪ್ರಯತ್ನಿಸುವ ನಯನಾ, ಎಂದೂ ತನ್ನ ಜೀವನದ ಬಗ್ಗೆ ಯೋಚಿಸುವವಳಲ್ಲ.

ಆದರೆ ಸತ್ಯ, ಪ್ರಾಮಾಣಿಕತೆ ಇದ್ದಲ್ಲಿ ದೇವರೇ ದಾರಿ ತೋರುತ್ತಾನೆ ಎಂಬ ಮಾತಿನಂತೆ ಅವಳ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತ ಹೋಗುತ್ತದೆ. ಆದರೆ ಈ ಸತ್ಯ, ಪ್ರಾಮಾಣಿಕತೆಯ ದಾರಿ ಸುಲಭವಲ್ಲ. ಕಲ್ಲು, ಮುಳ್ಳುಗಳು, ಅಡೆತಡೆಗಳನ್ನು ದಾಟಿ ಮುನ್ನಡೆಯಬೇಕಾಗುತ್ತದೆ. ಇದೇ ʻನಯನತಾರಾʼ ಪರಿಕಲ್ಪನೆಯ ಹಿಂದಿನ ತತ್ವ.

ಖ್ಯಾತ ಚಲನಚಿತ್ರ ನಿರ್ಮಾಪಕರಾದ ಜಯಣ್ಣ ಅವರು ತಮ್ಮ ಜಯಣ್ಣ ಕಂಬೈನ್ಸ್‌ಮೂಲಕ ʻನಯನತಾರಾʼ ಧಾರಾವಾಹಿ ನಿರ್ಮಿಸುತ್ತಿದ್ದು, ಈ ಮೂಲಕ ಮೊಟ್ಟ ಮೊದಲ ಸಲ ಕಿರುತೆರೆ ನಿರ್ಮಾಣಕ್ಕೆ ಕಾಲಿಡುತ್ತಿದ್ದಾರೆ. ʻಚಿತ್ರ ನಿರ್ಮಾಣ ಒಂದು ಸಲಕ್ಕೆ ಮುಗಿದು ಹೋಗುವ ಪ್ರಕ್ರಿಯೆ. ಧಾರಾವಾಹಿ ನಿರ್ಮಾಣವೆಂದರೆ ದಿನವೂ ಮದುವೆ ಮಾಡಿದಂತೆ.

ಇದು ಒಂದು ರೀತಿಯ ಸವಾಲಿನ ಕೆಲಸ. ಕನ್ನಡ ಕಿರುತೆರೆಗೆ ಉದಯ ಟಿವಿ ಮೂಲಕ ಕಾಲಿಡುತ್ತಿರುವುದು ಹೆಮ್ಮೆಯ ವಿಷಯ. ಉದಯ ಟಿವಿ ಯಾವತ್ತೂ ಚಿತ್ರ ನಿರ್ಮಾಪಕರನ್ನು ಬೆಂಬಲಿಸುತ್ತ ಬಂದಿದೆ. ನಿರೀಕ್ಷೆಗೆ ತಕ್ಕಹಾಗೆ ಈ ಧಾರಾವಾಹಿಯನ್ನು ಸಿನಿಮಾ ಗುಣಮಟ್ಟದಲ್ಲೇ ಕೊಡಬೇಕು ಅನ್ನೋದು ನಮ್ಮ ಗುರಿʼ ಎನ್ನುತ್ತಾರೆ ನಿರ್ಮಾಪಕ ಜಯಣ್ಣ.
ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ತಿಲಕ್‌ ʻನಯನತಾರಾʼ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ.

ತಾರಾಗಣದಲ್ಲಿ ಚೈತ್ರಾ, ಅಶ್ವಿನಿ, ಧನುಷ್‌, ಸಂಧ್ಯಾ ವೆಂಕಟೇಶ್‌, ಮಹಾದೇವ, ಸೂರಜ್‌ ಮುಂತಾದವರಿದ್ದಾರೆ. ಛಾಯಾಗ್ರಹಣ ರಮೇಶ್‌ ಎಚ್‌.ಎಸ್, ಸಂಕಲನ ಕೌಶಿಕ್‌ ಗೌಡ ಬೇಲೂರು. ʻನಯನತಾರಾʼ ಇದೇ ಫೆಬ್ರವರಿ 8 ರಿಂದ ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ 9:30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!