ಗಣಪತಿ ಸನ್ನಿಧಿಯಲ್ಲಿ `ವಿಕ್ರಮಚಿತ್ರ` ಮಹೂರ್ತ

ಜನರು ಅನಿರೀಕ್ಷಿತ ಕಥೆಗಳನ್ನು ಇಷ್ಟಪಡುತ್ತಾರೆಂದು ತಿಳಿದಿರುವ ಮಂಡ್ಯದ ಶ್ರೀಯುತ್ ‘ವಿಕ್ರಮಚಿತ್ರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಇದರೊಂದಿಗೆ ಕಾಲೇಜು ಹುಡುಗನ ಪಾತ್ರದಲ್ಲಿ ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಕುರಿತು ಹೇಳುವುದಾದರೆ ಎಂಬಿಎ ಮುಗಿಸಿ ಉತ್ತಮ ಹುದ್ದೆಯಲ್ಲಿದ್ದರೂ ಬಣ್ಣದ ವ್ಯಾಮೋಹದಿಂದ ಕೆಲಸಕ್ಕೆ ಬೆನ್ನು ತೋರಿಸಿ ಪೂರ್ಣ ಪ್ರಮಾಣವಾಗಿ ಇದರಲ್ಲಿ ತೊಡಗಿಕೊಂಡಿದ್ದಾರೆ. ಕರ್ವ ಚಿತ್ರದಲ್ಲಿ ಕಾರ್ಯ ನಿರ್ವಹಿಸಿರುವ ಶ್ರಿಯುತ್ ಹಲವರ ಬಳಿ ಅನುಭವ ಪಡೆದುಕೊಂಡಿದ್ದಾರೆ. ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಕ್ರಮ-ಬೇತಾಳದಲ್ಲಿ ಪರಿಸ್ಥಿತಿಗಳು ಒದಗಿಬಂದು ಪ್ರಶ್ನೆ ಮಾಡುತ್ತಿತ್ತು. ಅದರಂತೆ ಸಿನಿಮಾದಕತೆಯಲ್ಲಿ ಮನುಷ್ಯನಾದವನಿಗೆ ನಾನಾ ರೀತಿಯ ಪರಿಸ್ಥಿತಿಗಳು ಆವರಿಸಿಕೊಳ್ಳುತ್ತದೆ. ಇದನ್ನೆಲ್ಲಾ ಭೇದಿಸಿಕೊಂಡು ಸಫಲನಾಗುವನೇ ವಿಕ್ರಮನಾಗುತ್ತಾನೆ. ಅಂದರೆ ಕಾಲೇಜಿನಲ್ಲಿ ಹುಡುಗಿಯೊಬ್ಬಳು ಕಾಣೆಯಾಗುತ್ತಾಳೆ. ಇದನ್ನು ತನಿಖೆ ಮಾಡಲು ಹೋಗುವಾಗ ಒಂದಷ್ಟು ಸತ್ಯಾಂಶಗಳು ಹೊರಬರುತ್ತದೆ. ಕ್ಲೈಮಾಕ್ಸ್‍ದಲ್ಲಿ ಈತ ಅಂದುಕೊಂಡಿದ್ದ ಸತ್ಯಗಳು ಸುಳ್ಳಾಗಿ ಕಂಡುಬರುತ್ತದೆ ಎನ್ನುವುದು ಕಥಾ ಸಾರಾಂಶ.

ಶಿಲ್ಪ ಮತ್ತು ಸ್ನೇಹ ನಾಯಕಿಯರು. `ಚೌಕಟ್ಟು` ಚಿತ್ರ ನಿರ್ಮಿಸಿರುವ ಮಂಜುನಾಥ್ ನಿರ್ಮಾಣದ ಎರಡನೇ ಚಿತ್ರವಿದು. ನಿರ್ಮಾಣದ ಜೊತೆಗೆ ಮಂಜುನಾಥ್ ಈ ಚಿತ್ರದಲ್ಲಿ ಬರುವ ನಾಲ್ಕು ಹುಡುಗರ ಪೈಕಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿಶಂಕರ್ ಅವರು ಈ ಚಿತ್ರದಲ್ಲಿ ನಟಿಸುವ ಸಾದ್ಯತೆಯಿದೆ. ಇವರೊಂದಿಗೆ ರಂಗಭೂಮಿ, ಕಿರುತೆರೆ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡುವುದರೊಂದಿಗೆ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ. ಮೊಂಟಿ ಭರತ್ ಸಂಭಾಷಣೆ, ಛಾಯಾಗ್ರಹಣ ಕಿಟ್ಟಿ ಕೌಶಿಕ್, ಸಂಕಲನ ಮೋಹನ್‍ರಾಜ್, ಸಾಹಸ ಜೋನಿ ರಾಮದೇವ್ ಅವರದಾಗಿದೆ. ಮಾತೃ ಛಾಯಕ್ರಿಯೆಶನ್ಸ್ ಹಾಗೂ ಜಾಹಸ್ ಕ್ರಿಯಿಟೀವ್ ಇನ್ ಮೂಲಕ ಸಿದ್ದಗೊಳ್ಳುತ್ತಿರುವ ಈ ಚಿತ್ರದ ಚಿತ್ರದ ಮಹೂರ್ತ ಸಮಾರಂಭಕ್ಕೆ ಆಗಮಿಸಿದ ಕರ್ನಾಟಕ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್.ಎಂ.ಸುರೇಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿತಂಡಕ್ಕೆ ಶುಭ ಹಾರೈಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!