ದಕ್ಷಿಣ ಚಿತ್ರರಂಗದ ಖ್ಯಾತ ನಟಿ, ಲೇಡಿಸೂಪರ್ ಸ್ಟಾರ್ ವಿಜಯಶಾಂತಿ ತಮ್ಮ ಮುಂದಿನ ಜೀವನವನ್ನು ಜನ ಸೇವೆಗೆ ಮುಡಿಪಾಗಿಟ್ಟಿರುವುದಾಗಿ ಹೇಳಿದ್ದು, ಮಕ್ಕಳನ್ನು ಪಡೆಯುವ ಆಲೋಚನೆಯಿಂದ ದೂರವಿದ್ದಾರೆ.
ರೋಮ್ಯಾಂಟಿಕ್, ಸೆಂಟಿಮೆಂಟ್ ಮಾತ್ರವಲ್ಲದೇ ಆಕ್ಷನ್ ಸಿನಿಮಾಗಳಲ್ಲಿ ಅಬ್ಬರಿಸಿದ ದಕ್ಷಿಣ ಚಿತ್ರರಂಗದ ನಟಿ ವಿಜಯಶಾಂತಿ, ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ವಿಜಯಶಾಂತಿ ತಮ್ಮ ಕೌಟುಂಬಿಕ ಜೀವನ ಹೇಗಿದೆ? ಯಾಕೆ ಮಕ್ಕಳಾಗಿಲ್ಲ? ತನ್ನ ಬಳಿರುವ ಆಸ್ತಿಯನ್ನು ಏನು ಮಾಡುತ್ತಾರೆ? ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. “ಜನರಿಗೆ ಜೀವನವನ್ನು ಮುಡಿಪಾಗಿಡುವ ಉದ್ದೇಶದಿಂದ ಮಕ್ಕಳನ್ನು ಪಡೆಯದಿರಲು ನಿರ್ಧರಿಸಿದೆ. ನನ್ನ ಸಾವಿನ ನಂತರ ಎಲ್ಲಾ ಆಸ್ತಿ ಜನರಿಗೆ ಹೋಗುವಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ” ಹೇಳಿದ್ದಾರೆ.
ವಿಜಯಶಾಂತಿ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಿ, ಶಿಕ್ಷಣ ಮತ್ತು ವೈದ್ಯಕೀಯ ಆರೈಕೆಗಾಗಿ ತಮ್ಮ ಆಸ್ತಿಗಳನ್ನು ವಿನಿಯೋಗಿಸುವುದಾಗಿ ಹೇಳಿದ್ದಾರೆ. ತಮ್ಮ ಬಳಿ ಇರುವ ಎಲ್ಲಾ ಆಭರಣಗಳನ್ನು ವೆಂಕಟೇಶ್ವರ ಸ್ವಾಮಿ ಹುಂಡಿಯಲ್ಲಿ ಇಟ್ಟಿದ್ದೇನೆ ಎಂದು ಹೇಳಿರುವ ವಿಜಯಶಾಂತಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವಿಜಯಶಾಂತಿ 15ನೇ ವಯಸ್ಸಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಸುಮಾರು 40 ವರ್ಷಗಳ ಕಾಲ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಲೇಡಿಸೂಪರ್ ಸ್ಟಾರ್ ನಟಿಸಿದ್ದಾರೆ. 2009ರಲ್ಲಿ ಮೇಡಕ್ನಿಂದ ವಿಜಯಶಾಂತಿ ರಾಜಕೀಯರಂಗ ಪ್ರವೇಶಿಸಿದರು. 2014ರಲ್ಲಿ ಚುನಾವಣೆಯಲ್ಲಿ ಸೋತ ನಂತರ ಮತ್ತೆ ಚುನಾವಣೆಗೆ ಸ್ಪರ್ಧಿಸಿಲ್ಲ.
—-





Be the first to comment