‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಪ್ರೀಮಿಯರ್‍ ಶೋಗೆ ಮೆಚ್ಚುಗೆ

ದುಬೈನಲ್ಲಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’  ಪ್ರೀಮಿಯರ್‍ ಶೋ ಆಗಿದ್ದು, ಚಿತ್ರ ನೋಡಿರುವ ಅನಿವಾಸಿ ಕನ್ನಡಿಗರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ಟೀಸರ್‍, ಹಾಡುಗಳು ಮತ್ತು ಎರಡು ಟ್ರೇಲರ್‍ಗಳಿಂದ ಗಮನಸೆಳೆದಿರುವ ಅರುಣ್‍ ಅಮುಕ್ತ ರಚಿಸಿ-ನಿರ್ದೇಶಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಇದೇ ಶುಕ್ರವಾರ (ಜುಲೈ 19) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ದುಬೈನಲ್ಲಿ ಚಿತ್ರ ನೋಡಿ ಅನಿವಾಸಿ ಕನ್ನಡಿಗರು  ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಇತ್ತೀಚೆಗೆ ಚಿತ್ರತಂಡ ಮಾಧ್ಯಮಗೋಷ್ಠಿ ಆಯೋಜಿಸಿ, ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಚಂದನ್‍ ಶೆಟ್ಟಿ, ಸುನೀಲ್‍ ಪುರಾಣಿಕ್‍, ಅರವಿಂದ್ ರಾವ್‍, ಪ್ರಶಾಂತ್ ಸಂಬರ್ಗಿ, ದುಬೈನಲ್ಲಿ ಚಿತ್ರ ಬಿಡುಗಡೆ ಮಾಡಿರುವ OMG Moviesನ ಮಮತಾ ಸೆಂಧಿಲ್‍, ಅಮರ್‍, ಮನೋಜ್‍, ಮನಸ್ವಿ,  ಚಿತ್ರತಂಡದ ಹಲವರು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಚಂದನ್‍ ಶೆಟ್ಟಿ, ”ಇದು ಬಿಡುಗಡೆಯಾಗುತ್ತಿರುವ ನನ್ನ ಮೊದಲ ಚಿತ್ರ. ಈ ಚಿತ್ರವನ್ನು ಜನ ಒಪ್ಪುತ್ತಾರಾ? ನನ್ನ ಅಭಿನಯ ಇಷ್ಟವಾಗುತ್ತದಾ? ಎಂಬ ಭಯ ಇತ್ತು. ಈಗ ಒಂದು ಮಟ್ಟಕ್ಕೆ ರಿಲ್ಯಾಕ್ಸ್ ಆಗಿದ್ದೀನಿ. ಅದಕ್ಕೆ ಕಾರಣ ದುಬೈನಲ್ಲಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ. ಅಲ್ಲಿ ಸಾಕಷ್ಟು ಕನ್ನಡಿಗರು ಚಿತ್ರ ನೋಡಿದರು. ಅವರು ಎಲ್ಲ ಸಿನಿಮಾಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಇಡೀ ಚಿತ್ರಮಂದಿರ ತುಂಬಿತ್ತು. ಚಿತ್ರ ಮುಗಿದ ಮೇಲೆ ಎಲ್ಲರೂ ಒಳ್ಳೆಯ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅವರಿಗೆ ನಾನು ಸದಾ ಚಿರಋಣಿ” ಎಂದರು.

”ಈ ತಂಡದ ಭಾಗವಾಗಿರುವುದಕ್ಕೆ ನಾನು ನಿಜಕ್ಕೂ ಅದೃಷ್ಟವಂತ ಎಂದರೆ ತಪ್ಪಿಲ್ಲ. ನಮ್ಮ ನಿರ್ಮಾಪಕರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದೆ, ಎಲ್ಲದಕ್ಕೂ ಬಹಳ ಸಹಕಾರ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಾನು ಹೀರೋ ಎನ್ನುವುದಕ್ಕಿಂತ, ಅಮರ್, ಭಾವನಾ, ಮನಸ್ವಿ, ಸಿಂಚನಾ ಮತ್ತು ಮನೋಜ್‍ ಪ್ರಮುಖ ಪಾತ್ರಧಾರಿಗಳು. ಅವರೆಲ್ಲಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಈ ಚಿತ್ರದ ನಿಜವಾದ ಹೀರೋ ನಿರ್ದೇಶಕರು. ಒಂದೊಳ್ಳೆಯ ಕಥೆಯನ್ನು ಅವರು ಈ ಚಿತ್ರದ ಮೂಲಕ ಹೇಳಿದ್ದಾರೆ. ಮಕ್ಕಳು ಮತ್ತು ಅವರ ಪೋಷಕರು ಇಬ್ಬರೂ ಕೂತು ಒಟ್ಟಿಗೆ ನೋಡುವಂಥ ಚಿತ್ರ ಇದು. ಎಲ್ಲರೂ ಬಂದು ಚಿತ್ರ ನೋಡಿ” ಎಂದರು.

ಅರುಣ್‍ ಅಮುಕ್ತ ಮಾತನಾಡಿ, ”‘ನಮಗೆ ಯಾವ ಅಭಿಮಾನಿಗಳಿಲ್ಲ. ಚಿತ್ರ ನೋಡುವುದಕ್ಕೆ ಬರುವವರೇನಿದ್ದರೂ ಟ್ರೇಲರ್‍ ಮತ್ತು ಹಾಡುಗಳನ್ನು ನೋಡಿ ಬರಬೇಕು. ನಮ್ಮ ಪ್ರೇಕ್ಷಕರೇನಿದ್ದರೂ ಇವತ್ತಿನ ಯುವಜನತೆ. ಅವರಿಗೆ ಚಿತ್ರ ತಲುಪಿಸಬೇಕು. ಹೇಗೆ ತಲುಪಿಸಬೇಕು ಎಂಬುದರ ಕುರಿತು ನನಗೆ ಕೆಲವು ಯೋಚನೆಗಳಿದ್ದವು. ಹಾಗಾಗಿ, ನಾನೇ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾದೆ. ಸುಮಾರು 140 ಕೇಂದ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರದ ಟ್ರೇಲರ್‍ ಮತ್ತು ಹಾಡು ನೋಡಿ, ಕೆಲವು ಚಿತ್ರಮಂದಿರದವರು ಕರೆದು ಚಿತ್ರ ಪ್ರದರ್ಶಿಸುವ ಅವಕಾಶ ಕೊಟ್ಟಿದ್ದಾರೆ” ಎಂದರು.

ದುಬೈನಲ್ಲಿ ಚಿತ್ರ ಬಿಡುಗಡೆ ಮಾಡಿರುವ ಮಮತಾ ಸೆಂಧಿಲ್‍ ಮಾತನಾಡಿ, ‘ಇದಕ್ಕೂ ಮುನ್ನ ‘ಕಾಟೇರ’ ಚಿತ್ರವನ್ನು ಬಿಡುಗಡೆ ಮಾಡಿದ್ದೆವು. ಇದು ನಮ್ಮ ಎರಡನೆಯ ಚಿತ್ರ. ನೋಡಿದವರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬೇರೆ ದೇಶಗಳಲ್ಲೂ ಚಿತ್ರ ಬಿಡುಗಡೆ ಮಾಡುವುದಕ್ಕೆ ಅಲ್ಲಿನ ಕನ್ನಡಿಗರು ಕೇಳುತ್ತಿದ್ದು, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಮುಂತಾದ ಕಡೆ ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ” ಎಂದು ಹೇಳಿದರು.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವನ್ನು ವೆರೈಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ. ಶಿವಲಿಂಗೇಗೌಡ ನಿರ್ಮಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!