ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವೇಷ ಚಿತ್ರಕ್ಕೆ ಮುಹೂರ್ತ

ಮರಿ ಟೈಗರ್ ವಿನೋದ್ ಪ್ರಭಾಕರ್ ಭಾಗಿ
ಹಂಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನೂತನ ಸಿನಿಮಾ ವೇಷ, ಗವಿಪುರಂ ಗುಟ್ಟಳ್ಳಿಯಲ್ಲಿರುವ ಬಂಡೆ ಮಾಹಾಕಾಳಿ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿಕೊಂಡಿದೆ. ಈ ಮುಹೂರ್ತ ಕಾರ್ಯಕ್ರಮಕ್ಕೆ ಮರಿ ಟೈಗರ್ ವಿನೋದ್ ಪ್ರಭಾಕರ್ ಮುಖ್ಯ ಅತಿಥಿಯಾಗಿ ಆಗಮಿಸಿ ಹೊಸ ತಂಡಕ್ಕೆ ಬೆನ್ನು ತಟ್ಟಿ ಅಭಿನಂದನೆ ತಿಳಿಸಿದ್ದಾರೆ.

27ರಿಂದ ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್ ಮುಗಿಸುವ ಪ್ಲಾನ್
ಬಹುತೇಕ ಹೊಸಬರೇ ಸೇರಿಕೊಂಡು ವೇಷ ಚಿತ್ರವನ್ನು ತಯಾರು ಮಾಡುತ್ತಿದ್ದಾರೆ. ಈಗಾಗಲೇ ಉಡುಂಬಾ, ಗೂಳಿಹಟ್ಟಿ ಚಿತ್ರ ಸೇರಿ ಹಲವು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಬವ ಇರುವ ಪವನ್ ಕೃಷ್ಣ ವೇಷ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದರೆ, ನಿರ್ಮಾಪಕನಾಗಿ ಬಂಡವಾಳ ಹೂಡುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ ರಘು.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪವನ್ ಕೃಷ್ಣ, ಮಾಸ್, ಕಾಮಿಡಿ, ಸೆಂಟಿಮೆಂಟ್ ಮತ್ತು ಸಸ್ಪೆನ್ಸ್ ಹೀಗೆ ಈ ನಾಲ್ಕು ಅಂಶಗಳನ್ನು ಸೇರಿಸಿಕೊಂಡೇ ವೇಷ ಚಿತ್ರ ಮೂಡಿಬರಲಿದೆ. ಜೀವನದಲ್ಲಿ ಪ್ರತಿಯೊಬ್ಬರು ಒಂದೊಂದು ವೇಷ ಹಾಕಿರುತ್ತಾರೆ. ಇಲ್ಲಿ ಎಲ್ಲರಿಗೂ ಒಂದೊಂದು ವೇಷವಿದೆ. ಅದನ್ನು ಹಾಕಿದ ಉದ್ದೇಶ ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರವರು. ಜ. 27ರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದ್ದು, ಉಡುಪಿ, ಚಿಕ್ಕಮಗಳೂರು, ಕುಂದಾಪುರ ಸೇರಿ ಹಲವೆಡೆ ಚಿತ್ರೀಕರಣ ಮಾಡಿಕೊಳ್ಳಲಿದೆ ತಂಡ. ಒಟ್ಟಾರೆ 40 ದಿನಗಳ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರವನ್ನು ಮುಗಿಸಿಕೊಳ್ಳುವುದು ನಿರ್ಮಾಪಕರ ಪ್ಲ್ಯಾನ್.

ಈ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟಿ ವಾಣಿಶ್ರೀ. ಯುವ ತಂಡದ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಅವರಿಗೂ ಖುಷಿ ಇದೆ. ಹೊಸಬರ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಅವರಿಂದಲೇ ನಮಗೂ ಕೆಲಸ ಸಿಗುತ್ತದೆ ಎಂದರು.

ಇನ್ನು ಚಿತ್ರದಲ್ಲಿ ನಾಯಕನಾಗಿ ನಟಿಸುರವುದರ ಜತೆಗೆ ನಿರ್ಮಾಪಕನಾಗಿಯೂ ರಘು ಕಾಣಿಸಿಕೊಳ್ಳುತ್ತಿದ್ದಾರೆ. ‘ಮೂಲತಃ ನಾನು ರಂಗಭೂಮಿ ಹಿನ್ನಲೆಯಿಂದ ಬಂದವನು. ನಾಟಕ ಬರೆದು ಅಭಿನಯಿಸಿದ್ದೇನೆ. ಇತ್ತೀಚಿನ ಕೆಲ ವರ್ಷ ರಂಗಭೂಮಿಯಿಂದಲೂ ದೂರ ಉಳಿದಿದ್ದೆ. ಇದೀಗ ಸಿನಿಮಾ ಮೂಲಕ ಆಗಮಿಸುತ್ತಿದ್ದೇವೆ. ಒಂದು ಹೊಸ ರೀತಿಯ ಕತೆಯೊಂದಿಗೆ ಆಗಮಿಸುತ್ತಿದ್ದೇವೆ. ಅದಕ್ಕೆ ಎಲ್ಲರ ಸಹಕಾರವಿರಲಿ ಎಂದರು.

ಇನ್ನು ಮಂಜು ಪಾವಗಡ ಈ ಚಿತ್ರದಲ್ಲಿ ಶಿಕ್ಷಕನ ಪಾತ್ರ ನಿಭಾಯಿಸಿದರೆ, ಜಯ್ ಶೆಟ್ಟಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಸೌಖ್ಯ ಗೌಡ ಮತ್ತು ನಿಧಿ ಮಾರೋಲಿ ನಾಯಕಿಯರಾಗಿದ್ದು, ಸಾಂಪ್ರದಾಯಿಕ ಗೆಟಪ್‌ನಲ್ಲಿ ಈ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ನಾಯಕಿಯ ತಂಗಿಯ ಪಾತ್ರದಲ್ಲಿ ನೇಹಾ ಗೌಡ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಕಿರಿಕ್ ಹುಡುಗು ಕೀರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಉತ್ತಮ್ ಸಾರಂಗ್ ಸಂಗೀತ, ಸುರೇಂದ್ರ ಪಣಿಯೂರ್ ಛಾಯಾಗ್ರಹಣ, ಸನತ್ ಉಪ್ಪುಂದ ಸಂಕಲನ, ಸಹ ನಿರ್ದೇಶನ ಮತ್ತು ಸಂಭಾಷಣೆ ಪವನ್ ಕುಮಾರ್, ಜಾಗ್ವಾರ್ ಸಣ್ಣಪ್ಪ ಸಾಹಸ, ಪಿ. ರಾಮ್ ನೃತ್ಯ ನಿರ್ದೇಶನ, ಸಾಹಿತ್ಯ ಮನೀಷ್ ಮೋಯ್ಲಿ ಬರೆಯುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!