ಚಿತ್ರ : ವಾಮನ
ನಿರ್ದೇಶನ: ಶಂಕರ್ ರಾಮನ್
ನಿರ್ಮಾಣ: ಚೇತನ್ ಗೌಡ
ತಾರಾಗಣ: ಧನ್ವೀರ್ ಗೌಡ, ರೀಷ್ಮಾ ನಾಣಯ್ಯ, ಸಂಪತ್ ರಾಜ್ ಇತರರು
ರೇಟಿಂಗ್: 3/5
ಗ್ಯಾಂಗ್ ಸ್ಟರ್ ಪಾಪಣ್ಣನ ಇಬ್ಬರು ಪ್ರಮುಖರನ್ನು ವಾಮನ ಕೊಲೆ ಮಾಡುತ್ತಾನೆ. ವಾಮನನಿಗೂ ಪಾಪಣ್ಣನಿಗೂ ಇರುವ ದ್ವೇಷದ ಕಥೆಯನ್ನು ಹೇಳುವ ಚಿತ್ರ ವಾಮನ.
ಇದೊಂದು ಆಕ್ಷನ್ ಚಿತ್ರ. ಹೀಗಾಗಿ ಚಿತ್ರದಲ್ಲಿ ಹೊಡೆದಾಟಗಳು ಭರ್ಜರಿಯಾಗಿವೆ. ವಾಮನ ಯಾಕೆ ಪಾಪಣ್ಣನ ಹಿಂದೆ ಬಿದ್ದಿರುತ್ತಾನೆ ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕಾಗುತ್ತದೆ.
ಹೊಡೆದಾಟದ ಈ ಚಿತ್ರ ಪ್ರೇಕ್ಷಕರಿಂದ ತಾಳ್ಮೆಯನ್ನು ಬಯಸುತ್ತದೆ. ಆರಂಭದಲ್ಲಿ ಚಿತ್ರದ ಸನ್ನಿವೇಶಗಳು ಅರ್ಥ ಆಗುವುದಿಲ್ಲ. ನಿರ್ದೇಶಕರು ಹಲವು ವಿಷಯಗಳನ್ನು ಸಸ್ಪೆನ್ಸ್ ಇಟ್ಟಿದ್ದಾರೆ. ಕೊನೆಯವರೆಗೆ ತಾಳ್ಮೆಯಿಂದ ಇದ್ದಲ್ಲಿ ಮಾತ್ರ ಚಿತ್ರ ಅರ್ಥ ಆಗುತ್ತದೆ.
ಚಿತ್ರದಲ್ಲಿ ಹಲವು ವಿಷಯಗಳಿವೆ. ಆದರೆ ಇವು ಪ್ರೇಕ್ಷಕರನ್ನು ಗಾಢವಾಗಿ ತಟ್ಟುವುದಿಲ್ಲ. ದ್ವಿತೀಯಾರ್ಧದಲ್ಲಿ ಚಿತ್ರಕ್ಕೆ ಒಂದಷ್ಟು ವೇಗ ಸಿಗುತ್ತದೆ. ಆದರೆ ಈ ರೀತಿಯ ಚಿತ್ರಗಳು ಹಲವು ಬಂದಿರುವ ಕಾರಣ ವಿಭಿನ್ನವಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುವುದಿಲ್ಲ.
ವಾಮನ ಚಿತ್ರದ ಹೊಡೆದಾಟದ ಸನ್ನಿವೇಶದಲ್ಲಿ ಅರುಣ್ ರಾಜ್ ಹಾಗೂ ವಿಕ್ರಂ ಮೋರ್ ಅವರ ಸಾಹಸ ನಿರ್ದೇಶನ ಗಮನ ಸೆಳೆಯುತ್ತದೆ. ಮಹೇನ್ ಸಿಂಹ ಅವರು ಹೊಡೆದಾಟದ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಅಜನೀಶ್ ಲೋಕನಾಥ್ ಅವರ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
ಹೊಡೆದಾಟದ ದೃಶ್ಯಗಳನ್ನು ಹೊರತುಪಡಿಸಿದರೆ ಧನ್ವೀರ್ ಅವರ ಅಭಿನಯದಲ್ಲಿ ಏರಿಳಿತಗಳು ಕಂಡು ಬರುವುದಿಲ್ಲ. ಚಿತ್ರದ ನಾಯಕಿಗೆ ಹೆಚ್ಚಿನ ಕೆಲಸ ಇಲ್ಲ. ತಾರಾ, ಸಂಪತ್ ರಾಜ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಚ್ಚುತ್ ಕುಮಾರ್, ಅವಿನಾಶ್ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲ.
ಧನ್ವೀರ್ ಹಾಗೂ ದರ್ಶನ್ ಅಭಿಮಾನಿಗಳಿಗೆ, ಆಕ್ಷನ್ ಇಷ್ಟಪಡುವವರಿಗೆ ಚಿತ್ರ ಖುಷಿ ನೀಡಬಹುದು.
___





Be the first to comment