ದರ್ಶನ್ ಗ್ಯಾಂಗ್​ನಿಂದ ಉಮಾಪತಿ ಮೇಲೆ ಹಲ್ಲೆಗೆ ನಡೆದಿತ್ತು ಯತ್ನ!

”ತಮ್ಮ ಮೇಲೆಯೂ ಒಮ್ಮೆ ಹಲ್ಲೆ ನಡೆಸುವ ಯತ್ನ ದರ್ಶನ್ ಹಾಗೂ ಗ್ಯಾಂಗ್​ನಿಂದ ಆಗಿತ್ತು” ಎಂಬ ಆತಂಕಕಾರಿ ವಿಷಯವನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಿಚ್ಚಿಟ್ಟಿದ್ದಾರೆ.

ಉಮಾಪತಿ ಅವರು ದರ್ಶನ್ ಹೆಸರು ಬಳಸಿ 25 ಕೋಟಿ ರೂಪಾಯಿ ಬ್ಯಾಂಕ್ ಲೋನ್​ಗೆ ಅರ್ಜಿ ಹಾಕಿ ವಂಚನೆಗೆ ಯತ್ನಿಸಿದ್ದಾರೆ ಎಂದು ದರ್ಶನ್ ಹಾಗೂ ಗ್ಯಾಂಗ್ ಆರೋಪ ಮಾಡಿ  ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿತ್ತು. ಅಂದು ಉಮಾಪತಿ ಶ್ರೀನಿವಾಸ್ ಸಹ ಮೈಸೂರಿನಲ್ಲಿದ್ದರು. ಆ ದಿನ ದರ್ಶನ್ ಗೆಳೆಯರು ಉಮಾಪತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂಬ ಅಂಶ ಹೊರ ಬಂದಿತ್ತು.

ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಉಮಾಪತಿ, ”ಮೈಸೂರಿನ ಹೋಟೆಲ್​ ಒಂದರಲ್ಲಿ ತಮ್ಮ ಮೇಲೂ ಸಹ ಹಲ್ಲೆಗೆ ದರ್ಶನ್ ಮತ್ತು ಗ್ಯಾಂಗ್ ಸ್ಕೆಚ್ ಹಾಕಿತ್ತು”ಎಂದಿದ್ದಾರೆ.

”ಹೋಟೆಲ್ ಒಂದಕ್ಕೆ ಆಯುಧಗಳನ್ನುತಂದು ಇರಿಸಿಕೊಳ್ಳಲಾಗಿತ್ತು. ನನ್ನನ್ನು ಹೊಡೆಯುವ ಯೋಜನೆ ಆ ದಿನ ಹಾಕಿದ್ದರು.  ಅಂದು ನಾನು ಬದುಕಿ ಬಂದಿದ್ದೇ ಹೆಚ್ಚು. ಮೈಸೂರಿ​ಗೆ ನನ್ನನ್ನು ಕರೆಸಿ ಇವರು ಆಡದ ಮಾತುಗಳಿಲ್ಲ” ಎಂದು ಉಮಾಪತಿ ಹಳೆಯದನ್ನು ನೆನಪು ಮಾಡಿಕೊಂಡಿದ್ದಾರೆ.

 ”’ರಾಬರ್ಟ್’ ಸಿನಿಮಾದ ಚಿತ್ರೀಕರಣದ ವೇಳೆ ಕೆಲವು ಬಾರಿ ಕೆಲವರೊಟ್ಟಿಗೆ ದರ್ಶನ್ ಒರಟಾಗಿ ನಡೆದುಕೊಂಡಿದ್ದುಂಟು. ಆ ಸಮಯದಲ್ಲಿ ಅವರು ತಪ್ಪು ಮಾಡಿದಾಗ ನಾನು ನೇರವಾಗಿ ಹೇಳುತ್ತಿದ್ದೆ. ಹೀಗೆಲ್ಲ ಮಾಡುವುದರಿಂದ ಯಾರಿಗೂ ಲಾಭವಿಲ್ಲ, ತಾಳ್ಮೆಯಿಂದಿರಿ ಎಂದು ಬುದ್ಧಿವಾದ ಹೇಳುತ್ತಿದ್ದೆ. ಒಮ್ಮೊಮ್ಮೆ ನಿರ್ಮಾಪಕನಾಗಿ ನಾನು ಯಾರ ಮೇಲಾದರೂ ಸಿಟ್ಟಿನಿಂದ ವರ್ತಿಸಿದಾಗ ದರ್ಶನ್ ನನಗೆ ಬುದ್ಧಿ ಹೇಳುತ್ತಿದ್ದರು. ಆದರೆ ಇಂದು ಅವರಿಂದ ಕ್ಷಮಿಸಲಾಗದ ತಪ್ಪಾಗಿದೆ. ವ್ಯಕ್ತಿ ತಾಳ್ಮೆಯಿಂದ ಇದ್ದರೆ ಏನೇನೋ ಸಾಧಿಸಬಹುದು. ಅವರ ಸಿಟ್ಟು,  ಅಂಹಕಾರವೇ ಇಂದಿನ ಅವರ ಸ್ಥಿತಿಗೆ ಕಾರಣ” ಎಂದಿದ್ದಾರೆ ಉಮಾಪತಿ.

”ಯಾವಾಗಲೂ ಲ್ಯಾಂಬೋರ್ಗಿನಿ ಲ್ಯಾಂಬೋರ್ಗಿನಿ ಅಂತಾ ಹೇಳ್ತಾರೆ.  ಆ ಲ್ಯಾಂಬೋರ್ಗಿನಿ ಬುಕ್ ಮಾಡೋಕೆ ಅಡ್ವಾನ್ಸ್ ಕೊಟ್ಟವನೇ ನಾನು. ಹಾಗಂತ ನಾನು ಪುಕ್ಸಟ್ಟೆ ಕೊಟ್ಟಿಲ್ಲ.ಅವರು ಮಾಡುವ ಕೆಲಸಕ್ಕಾಗಿ ಕೊಟ್ಟಿದ್ದೇನೆ. ನಾನು ದುಡಿದು ಹಣ ಸಂಪಾದನೆ ಮಾಡಿ ಆಮೇಲೆ ಸಿನಿಮಾಗಾಗಿ ದುಡ್ಡು ನೀಡಿದ್ದೇನೆ” ಎಂದರು.

ದರ್ಶನ್  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಕನಿಷ್ಟ ಮೂರು ತಿಂಗಳು ಹೊರಗೆ ಬರುವುದು ಅನುಮಾನ ಎನ್ನಲಾಗುತ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!