ಟಾಲಿವುಡ್ ಸ್ಟಾರ್ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ನಿಯಮ ಉಲ್ಲಂಘಿಸಿದ್ದಲ್ಲದೇ ಸಂಚಾರಿ ಪೊಲೀಸ್ ಜೊತೆ ಜಗಳ ಮಾಡಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಬಿಲಿ ಹಿಲ್ಸ್ನ ಜರ್ನಲಿಸ್ಟ್ ಕಾಲೋನಿಯಲ್ಲಿ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಕಾರಿನಲ್ಲಿ ಬಂದು ರಾಂಗ್ ರೂಟ್ ಮೂಲಕ ವೃತ್ತದಲ್ಲಿರುವ ತಮ್ಮ ಮನೆಗೆ ಹೋಗಲು ಪ್ರಯತ್ನಿಸಿದರು. ಅಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಕಾನ್ಸ್ಟೆಬಲ್ ನರೇಶ್ ಕಾರನ್ನು ಗಮನಿಸಿ ಅದನ್ನು ನಿಲ್ಲಿಸಿದರು. ಆದರೆ ಬೆಲ್ಲಂಕೊಂಡ ಶ್ರೀನಿವಾಸ್ ಸಂಚಾರಿ ಕಾನ್ಸ್ಟೆಬಲ್ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಡಿಕ್ಕಿ ಹೊಡೆಯಲು ಪ್ರಯತ್ನಿಸಿದರು. ಇದರಿಂದ ಕಾನ್ಸ್ಟೆಬಲ್ ಭಯದಿಂದ ಪಕ್ಕಕ್ಕೆ ಸರಿದರು ಎಂದು ಹೇಳಲಾಗಿದೆ.
ಬೆಲ್ಲಂಕೊಂಡ ಶ್ರೀನಿವಾಸ್ ‘ಅಲ್ಲುಡಿ ಸೀನು’ ಚಿತ್ರದ ಮೂಲಕ ಟಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಕವಚಂ, ರಾಕ್ಷಸುಡು, ಜಯ ಜಾನಕಿ ನಾಯಕ, ಸಾಕ್ಷಿಂ ಚಿತ್ರಗಳ ಮೂಲಕ ಮನ್ನಣೆ ಗಳಿಸಿದರು.
ಬೆಲ್ಲಂಕೊಂಡ ಶ್ರೀನಿವಾಸ್ , ಈಗ ಬಹುತಾರಾಗಣದ ಭೈರವಂ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಚು ಮನೋಜ್ ಮತ್ತು ನರ ರೋಹಿತ್ ಇತರ ನಾಯಕರು. ಈ ಚಿತ್ರವನ್ನು ವಿಜಯ್ ಕನಕಮೇಡಲ ನಿರ್ದೇಶಿಸಿದ್ದಾರೆ. ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕೆ. ಕೆ. ರಾಧಾಮೋಹನ್ ನಿರ್ಮಿಸಿದ್ದಾರೆ. ಚಿತ್ರ ಮೇ 30 ರಂದು ಬಿಡುಗಡೆಯಾಗಲಿದೆ.

Be the first to comment