ನಾಳೆ ‘ಪುನೀತ್​ ನಮನ’ ಕಾರ್ಯಕ್ರಮ: ಸಕಲ ಸಿದ್ಧತೆ

ನಟ ಪುನೀತ್​ ರಾಜ್​ಕುಮಾರ್​ ಸ್ಮರಣಾರ್ಥ ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.16ರಂದು ನಡೆಯಲಿರುವ ‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ.

ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್‌ ಕುಟುಂಬದ ಸದಸ್ಯರ ಜೊತೆಗೆ ದಕ್ಷಿಣ ಭಾರತ ಸಿನಿಮಾರಂಗದ ಅನೇಕ ಸೆಲೆಬ್ರಿಟಿಗಳು ಹಾಜರು ಇರಲಿದ್ದು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲಿದ್ದಾರೆ.

‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಪ್ರಮುಖ ರಾಜಕೀಯ ಮುಖಂಡರ ಸಹ ಭಾಗಿ ಆಗುವ ಸಾಧ್ಯತೆ ಇದೆ. ಅಲ್ಲದೇ ದಕ್ಷಿಣ ಭಾರತ ಚಿತ್ರ ರಂಗದ ರಜನಿಕಾಂತ್, ವಿಶಾಲ್, ದಳಪತಿ ವಿಜಯ್, ಅಜಿತ್, ವಿಜಯ್ ಸೇತುಪತಿ, ಚಿರಂಜೀವಿ, ಅಲ್ಲು ಅರ್ಜುನ್, ಜ್ಯೂ. ಎನ್‌ಟಿಆರ್, ಪ್ರಭಾಸ್, ರಾಮ್‌ ಚರಣ್, ಮೋಹನ್‌ಲಾಲ್ ಸೇರಿದಂತೆ ಪ್ರಮುಖ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ.

ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರಾದ ಸುದೀಪ್, ಯಶ್, ಗಣೇಶ್, ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಈಗಾಗಲೇ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಚಿತ್ರರಂಗದಿಂದ ಆಯೋಜನೆ ಮಾಡಲಾಗಿರುವ ಈ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ ಕಾರ್ಯಕ್ರಮದ ನೇರ ಪ್ರಸಾರವನ್ನು ಅಭಿಮಾನಿಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಪುನೀತ್ ರಾಜ್ ಕುಮಾರ್ ಅಕ್ಟೋಬರ್ 29ರಂದು ಹಠಾತ್ ಆಗಿ ನಿಧನ ಹೊಂದಿದ್ದು, ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಚಿತ್ರರಂಗ ಪುನೀತ್ ಅಗಲಿಕೆಗೆ ಇಂದಿಗೂ ಕಂಬನಿ ಮಿಡಿಯುತ್ತಿದೆ. ಪುನೀತ್ ಅವರ ಹಠಾತ್ ನಿಧನದಿಂದ ಇನ್ನೂ ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಹೊರಗೆ ಬಂದಿಲ್ಲ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!