ಚಿತ್ರ: ತಿಮ್ಮನ ಮೊಟ್ಟೆಗಳು
ನಿರ್ದೇಶನ: ರಕ್ಷಿತ್ ತೀರ್ಥಹಳ್ಳಿ
ತಾರಾಗಣ: ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಪ್ರಗತಿ ಪ್ರಭು, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ಇತರರು
ರೇಟಿಂಗ್: 3.5
ಪ್ರಕೃತಿಯ ಜೊತೆಗೆ ಬದುಕುವುದು ಮುಖ್ಯ. ಅದರ ವಿರುದ್ಧ ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಹೇಳುವ ಸೂಕ್ಷ್ಮ ಸಂವೇದನೆಯ ಚಿತ್ರ ಈ ವಾರ ತೆರೆಗೆ ಬಂದಿರುವ ‘ ತಿಮ್ಮನ ಮೊಟ್ಟೆಗಳು’.
ಇದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರು ಬರೆದಿರುವ ಕಥಾ ಸಂಕಲನದ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ನಿರ್ದೇಶಕರು ಚಿತ್ರದ ಮೂಲಕ ಪ್ರತಿಯೊಂದು ಜೀವಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ ಎನ್ನುವುದನ್ನು ಹೇಳುವ ಯತ್ನ ಮಾಡಿದ್ದಾರೆ.
ಅಡಿಕೆಗೆ ಔಷಧಿ ಸಿಂಪಡಣೆ ಮಾಡಿಕೊಂಡು ಬದುಕುವ ತಿಮ್ಮನಿಗೆ ಕಾಳಿಂಗ ಸರ್ಪದ ಸಂರಕ್ಷಣೆಯಲ್ಲಿ ತೊಡಗುವ ತಂಡದ ಪರಿಚಯವಾಗುತ್ತದೆ. ಊರಿನ ಮುಖಂಡರು ಕಾಳಿಂಗ ಸರ್ಪದ ಮೊಟ್ಟೆಗಳ ಸಂರಕ್ಷಣೆಯ ಕೆಲಸ ಮಾಡದಂತೆ ಹೇಳಿದರೂ, ತಿಮ್ಮ ಮನೆ, ಗದ್ದೆ ಪಡೆಯಬೇಕು ಎನ್ನುವ ಹಂಬಲದಿಂದ ಕಾಳಿಂಗ ಸರ್ಪ ಹಿಡಿಯಲು ಬಂದ ತಂಡದ ಜೊತೆಗೆ ಕೈಜೋಡಿಸುತ್ತಾನೆ. ಮುಂದೆ ಏನಾಗುತ್ತದೆ ಎನ್ನುವುದನ್ನು ತಿಳಿಯಲು ಈ ಚಿತ್ರವನ್ನು ನೋಡಬೇಕಿದೆ.
ತಿಮ್ಮನ ಪಾತ್ರದಲ್ಲಿ ಕೇಶವ್ ಗುತ್ತಳಿಕೆ ಗಮನ ಸೆಳೆಯುವಂತೆ ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್ ಕಾಳಿಂಗ ಸರ್ಪದ ಸಂರಕ್ಷಕನ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ನಾಯಕಿ ಪ್ರಗತಿ ಪ್ರಭು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.
ಪ್ರಕೃತಿ, ಮಲೆನಾಡಿನ ಪರಿಸರದಲ್ಲಿ ನಡೆಯುವ ವಿಷಯಗಳನ್ನು ಇಟ್ಟುಕೊಂಡು ನಿರ್ದೇಶಕರು ಚಿತ್ರವನ್ನು ರೂಪಿಸಿದ್ದಾರೆ. ನಿಸರ್ಗ, ಅಲ್ಲಿನ ಪರಿಸರದ ಕಥೆಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಹೊಸ ಅನುಭವವನ್ನು ನೀಡುತ್ತದೆ.






Be the first to comment