Meghanaraj: ʼತತ್ಸಮ ತದ್ಭವ’ ಶೂಟಿಂಗ್‌ ಮುಕ್ತಾಯ

ʼತತ್ಸಮ ತದ್ಭವ’ ಮೂಲಕ ಮೇಘನಾ ರಾಜ್​ ರೀ ಎಂಟ್ರಿ ಕೊಟ್ಟಿದ್ದು, ಚಿತ್ರದ ಶೂಟಿಂಗ್​ ಮುಕ್ತಾಯ ಆಗಿದೆ.

ಪತಿ, ನಟ ಚಿರಂಜೀವಿ ಸರ್ಜಾ ಅಗಲಿಕೆ ನಂತರ ಮೇಘನಾ ರಾಜ್ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಚಿರು ನಿಧನದ ಸಮಯದಲ್ಲಿ ಗರ್ಭಿಣಿಯಾಗಿದ್ದ ಅವರು ಮಗನ ಆರೈಕೆಯಲ್ಲಿ ಬ್ಯುಸಿಯಾಗಿ ಬಿಟ್ಟಿದ್ದರು.

ಕೆಲವು ತಿಂಗಳ ಹಿಂದೆಯೇ ʼತತ್ಸಮ ತದ್ಭವ’ ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಈಗ ಚಿತ್ರದ ಶೂಟಿಂಗ್‌ ಮುಕ್ತಾಯ ಆಗಿದೆ.

ಮೇಘನಾ ರಾಜ್​ ಅವರು, “ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂಥ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ನಾನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಸಿನಿಮಾವನ್ನು ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಕಥೆ ಬರೆದಿದ್ದು ಜೊತೆಗೆ ನಿರ್ದೇಶನ ಮಾಡಿದ್ದಾರೆ. ನಾನು ಇಂಥ ಪಾತ್ರ ಮಾಡಿಲ್ಲ. ಈ ಸಿನಿಮಾ ನನಗೆ ಒಳ್ಳೆಯ ಹೆಸರು ತಂದು ಕೊಡುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ದೇವರಾಜ್ ಅವರು “ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿ ನನಗಿದೆ” ಎಂದು ಹೇಳಿದ್ದಾರೆ.

“ಇದೊಂದು ಇನ್ವೆಸ್ಟಿಗೇಷನ್​​ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದು ಎಂಬ ನಂಬಿಕೆಯಿದೆ” ಎಂದು ನಿರ್ದೇಶಕ ವಿಶಾಲ್ ಆತ್ರೇಯ ಹೇಳಿದ್ದಾರೆ.

ನಿರ್ಮಾಪಕ ಪನ್ನಗಭರಣ, “ಬಹುತೇಕ ಈ‌ ಸಿನಿಮಾ ಶೂಟಿಂಗ್ ಮುಗಿದಿದೆ. ರೀ ರೆಕಾರ್ಡಿಂಗ್ ನಡೆಯುತ್ತಿದೆ. ಚುನಾವಣೆ ಮುಗಿದ ನಂತರ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!