ಹಿರಿಯ ಪತ್ರಕರ್ತ, ನಟ ಸುರೇಶ್ಚಂದ್ರ ಇನ್ನಿಲ್ಲ

‘ಚೆಲುವಿನ ಚಿತ್ತಾರ’, ‘ಉಗ್ರಂ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಪತ್ರಕರ್ತ ಲಿಂಗೇನಹಳ್ಳಿ ಸುರೇಶ್ಚಂದ್ರ ಅವರು ಶುಕ್ರವಾರ ಕೊನೆಯುಸಿರು ಎಳೆದಿದ್ದಾರೆ. ಹಲವು ದಿನಗಳಿಂದ ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ, ನಟ ಎಲ್.ಎಚ್. ಸುರೇಶ್ಚಂದ್ರ ಅವರು ಶುಕ್ರವಾರ (ಜೂ.11) ಮಧ್ಯಾಹ್ನ ನಿಧನರಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಕೊನೆಯುಸಿರು ಎಳೆದಿದ್ದಾರೆ. ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ್ದ ಅವರು, ಕೆಲ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿ, ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಮಾಧ್ಯಮ, ಸಿನಿಮಾರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

ಹಲವು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿರುವ ಸುರೇಶ್ಚಂದ್ರ ಅವರು, ನಾಟಕ, ಸಾಹಿತ್ಯ, ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. 2007ರಲ್ಲಿ ತೆರೆಕಂಡ ‘ಚೆಲುವಿನ ಚಿತ್ತಾರ’ ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡಿದ್ದರು. ನಂತರ ‘

ಉಗ್ರಂ’, ‘ಕಿಚ್ಚ ಹುಚ್ಚ’, ‘ರಣ’, ‘ಶೈಲೂ’, ‘ಜಂಗ್ಲೀ’ ಮುಂತಾದ ಸಿನಿಮಾಗಳಲ್ಲಿ ಮಹತ್ವದ ಪಾತ್ರಗಳನ್ನು ನಿಭಾಯಿಸಿದ್ದರು. 2019ರಲ್ಲಿ ಅವರು ಪತ್ರಿಕೋದ್ಯಮದಿಂದ ನಿವೃತ್ತರಾಗಿದ್ದರು.
ದಂತಚೋರ ವೀರಪ್ಪನ್ ಕುರಿತು ಅವರು ಬರೆಯುತ್ತಿದ್ದ ಲೇಖನಗಳು ಬಹಳ ಖ್ಯಾತಿ ಪಡೆದುಕೊಂಡಿದ್ದವು. ಸುರೇಶ್ಚಂದ್ರ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಮಧುಗಿರಿ ತಾಲ್ಲೂಕಿನ ಲಿಂಗೇನಹಳ್ಳಿಯಲ್ಲಿ ನೆರವೇರಿಸಲಾಗುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!