ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಕಾನೂನು ಮೊರೆ ಹೋಗಿದ್ದ ಕಮಲ್ ಹಾಸನ್ಗೆ ಭಾರೀ ಹಿನ್ನಡೆಯಾಗಿದೆ. ಹೈಕೋರ್ಟ್ ಕಮಲ್ಗೆ ಚಾಟಿ ಬೀಸಿದೆ.
ಇಂದು ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಪೀಠ ಜುಲೈ 10ರಂದು ವಿಚಾರಣೆ ಮುಂದೂಡಿದೆ. ಅರ್ಜಿಯ ವಿಚಾರಣೆ ಮಾಡಿದ ಹೈಕೋರ್ಟ್ ನ್ಯಾ. ನಾಗಪ್ರಸನ್ನ, ‘ಜನರ ಭಾವನೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ನೀವು ತಪ್ಪು ಮಾಡಿ ಅದರ ಸಮರ್ಥನೆಗೆ ನಿಂತಿದ್ದೀರಿ. ತಪ್ಪು ಮಾಡಿ ನಮಗೆ ರಕ್ಷಣೆ ಕೊಡಿ ಎಂದರೆ ಹೇಗೆ ಸಾಧ್ಯ?’ ಎಂದರು. ಬಳಿಕ ಮಧ್ಯಾಹ್ನದ ವೇಳೆಗೆ ಅಭಿಪ್ರಾಯ ತಿಳಿಸುವಂತೆ ಕಾಲಾವಕಾಶ ನೀಡಿದರು.
ಮಧ್ಯಾಹ್ನ ವಿಚಾರಣೆ ನಡೆದಾಗ ಕಮಲ್ ಪರ ವಕೀಲರು , ಕಮಲ್ ಹಾಸನ್ ಅವರು ಫಿಲಂ ಚೇಂಬರ್ಗೆ ಬರೆದಿರುವ ಪತ್ರವನ್ನು ಓದಿ ನಾವೆಲ್ಲರೂ ಒಂದೇ, ಒಂದೇ ಕುಟುಂಬವೆಂದು ಕಮಲ್ ಹೇಳಿದ್ದಾರೆ. ತಮಿಳಿನಂತೆ ಕನ್ನಡ ಕೂಡಾ ಶ್ರೀಮಂತ ಭಾಷೆ. ಕನ್ನಡಿಗರ ಭಾಷಾ ಪ್ರೇಮಕ್ಕೆ ನಾನು ಹೆಮ್ಮೆಪಡುತ್ತೇನೆ. ಎಲ್ಲಾ ಭಾಷೆಗಳಿಗೂ ಸಮಾನತೆ ಇರಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಕಮಲ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದರು.
ಆದರೆ ನ್ಯಾಯಮೂರ್ತಿಗಳು ಪರೋಕ್ಷವಾಗಿ ಕಮಲ್ ಕ್ಷಮೆ ಕೇಳಿಲ್ಲ ಎಂದರು.ಕಮಲ್ ಪರ ವಕೀಲರು, ‘ಕ್ಷಮೆ ಕೇಳಿದರೆ ಎಲ್ಲವೂ ಸರಿ ಹೋಗಲಿದೆ. ಕಮಲಹಾಸನ್ ಗೆ ಯಾವುದೇ ದುರುದ್ದೇಶವಿರಲಿಲ್ಲ. ಕನ್ನಡದ ಬಗ್ಗೆ ಅವರ ನಿಲುವನ್ನು ಪತ್ರದಲ್ಲಿ ತಿಳಿಸಿದ್ದಾರೆ. ಕನ್ನಡದ ಪರ ಅವರ ಒಲವನ್ನು ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಸ್ಪಷ್ಟನೆ ನೀಡಿದ್ದಾರೆ’ ಎಂದಿದ್ದಾರೆ.
‘ನಿರ್ಮಾಪಕರು ‘ಥಗ್ ಲೈಫ್’ ಸಿನಿಮಾ ಜೂನ್ 5ರಂದು ಬಿಡುಗಡೆ ಮಾಡಲು ಬಯಸುತ್ತಿಲ್ಲ. ಈ ವಿಷಯವಾಗಿ ಫಿಲಂ ಚೇಂಬರ್ ಜೊತೆಗೆ ಚರ್ಚೆ ನಡೆಸಲು ಅವರು ತಯಾರಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೂ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲ್ಲ. ಒಂದು ವಾರ ವಿಚಾರಣೆ ಮುಂದೂಡಿ’ ಎಂದು ಕಮಲ್ ಪರ ವಕೀಲರು ಮನವಿ ಮಾಡಿದರು. ಅದರಂತೆ ಕೋರ್ಟ್ ಜುಲೈ 10ರಂದು ವಿಚಾರಣೆ ಮುಂದೂಡಿದೆ.
—-

Be the first to comment