‘ಶತಭಿಷ’ ಜೂನ್ 28ರಂದು ತೆರೆಗೆ

ವೆಂಕಟೇಶ್ ನಿರ್ದೇಶನದ ‘ಶತಭಿಷ’ ಚಿತ್ರ  ಜೂನ್ 28ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ‌.

ಈಚೆಗೆ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪೊಲೀಸರು, ಟೆರರಿಸ್ಟ್ ಗಳು ಹಾಗೂ ನಾಲ್ವರು ಪೋಲಿ ಹುಡುಗರು ಅನಿರೀಕ್ಷಿತವಾಗಿ ಒಂದು ಕಡೆ ಸೇರುವಂತಾಗಿ ಅಲ್ಲಿ ಒಂದಷ್ಟು ಸಮಸ್ಯೆಗಳು ಎದುರಾಗುತ್ತವೆ. ಅದನ್ನೆಲ್ಲ ಎದುರಿಸಿ ನಾಲ್ವರು ಪೋಲಿ ಹುಡುಗರು ಹೇಗೆ ಹೊರಬರುತ್ತಾರೆ ಎನ್ನುವುದೇ ಶತಭಿಷ ಚಿತ್ರದ ಕಥಾಹಂದರ.

‘ಶತಭಿಷ’ ಚಿತ್ರವನ್ನು ಶ್ರೀ ದುರ್ಗಿ ವಿಷ್ಣು ಕಂಬೈನ್ಸ್ ಮೂಲಕ ಕಾಶಿ ಶೇಖರ್ ಅವರು ನಿರ್ಮಾಣ ಮಾಡಿದ್ದಾರೆ. ದೀಪು ಅರ್ಜುನ್ ಚಿತ್ರದ ನಾಯಕನಾಗಿದ್ದು, ಶೋಭಿತಾ ಶಿವಣ್ಣ ನಾಯಕಿಯಾಗಿ ನಟಿಸಿದ್ದಾರೆ. ವಿಭಿನ್ನ ಶೈಲಿಯ ಕಳ್ಳ ಪೋಲೀಸ್ ಆಟವನ್ನು ನಿರ್ದೇಶಕ ವೆಂಕಟೇಶ್ ಈ ಚಿತ್ರದ ಮೂಲಕ ಹೇಳಿದ್ದಾರೆ. ತಂಗಪಾಂಡಿಯನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಚಿತ್ರದ ಕುರಿತಂತೆ ಮಾತನಾಡಿದ ನಾಯಕ ದೀಪು ಅರ್ಜುನ್, ‘ಈಗಿನ ಟ್ರೆಂಡ್ ಗೆ ಬೇಕಾದ ಕಥೆಯಿದು. ವಿರಾಜಪೇಟೆ, ಮೇಲುಕೋಟೆ, ಹುಬ್ಬಳ್ಳಿ, ಮುಂಬೈ, ಗುಲ್ಬರ್ಗಾ, ಬೆಂಗಳೂರು, ಚಿಂತಾಮಣಿ ಅಲ್ಲದೆ ಚೆನ್ನೈ ಸೇರಿದಂತೆ ಸಾಕಷ್ಟು ಲೊಕೇಶನ್‌ಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದಲ್ಲಿ ತುಂಟಾಟ ಮಾಡಿಕೊಂಡಿದ್ದ ಹುಡುಗ ಹೇಗೆ ನಕ್ಸಲೈಟ್ ಆಗ್ತಾನೆ? ಎಲ್ಲಿಂದಲೋ ಬಂದ ನಕ್ಸಲೈಟ್ ಗಳು ಒಬ್ಬ ಹುಡುಗನನ್ನು ಹೇಗೆಲ್ಲಾ ಹಾಳು ಮಾಡ್ತಾರೆ? ಆತನಿಗೆ ನಾಯಕಿಯ ಪರಿಚಯ ನಂತರ ಪ್ರೀತಿಯಾಗಿ ಮುಂದೇನಾಗುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎಂದು ಹೇಳಿದರು.

‘ನಮಗೆ ಸಿನಿಮಾ ಮಾಡೋ ಆಸಕ್ತಿ ಇರಲಿಲ್ಲ. ಆರಂಭದಲ್ಲಿ ನಾಯಕನೇ ನಿರ್ಮಾಪಕನಾಗಿದ್ದರು. ನನ್ನ ಬಳಿ ಬಂದು ಕೇಳಿದಾಗ ಈ ತಂಡಕ್ಕೆ ಜೊತೆಯಾದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾನು ಸಹ ಸಣ್ಣ ಪಾತ್ರ ಮಾಡಿದ್ದೇನೆ. ಕುಟುಂಬ ಸಮೇತ ನೋಡುವಂಥ ಒಳ್ಳೆಯ ಕಥೆ ಸಿನಿಮಾದಲ್ಲಿದೆ’ ಎಂದು ನಿರ್ಮಾಪಕ ಕಾಶಿ ಶೇಖರ್ ಹೇಳಿದರು.ನಿರ್ಮಾಣದ ಜೊತೆಗೆ ಪೊಲೀಸ್ ಅಧಿಕಾರಿಯಾಗಿಯೂ ಅವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

‘ಶತಭಿಷ’ ಚಿತ್ರದಲ್ಲಿ ಮೂರು ಹಾಡುಗಳಿದ್ದು ಅಭಿಷೇಕ್ ಜಿ. ರಾಯ್ ಅವರ ಸಂಗೀತ, ಅಂಜನ್ ಅವರ ಸಾಹಿತ್ಯವಿದೆ. ನಾಲ್ಕು ಸಾಹಸ ದೃಶ್ಯಗಳನ್ನು ಚಂದ್ರುಬಂಡೆ, ಅಶೋಕ್ ಸಂಯೋಜನೆ ಮಾಡಿದ್ದಾರೆ. ಚಿತ್ರದ ಪಾತ್ರಗಳಲ್ಲಿ ಟೆನ್ನಿಸ್ ಕೃಷ್ಣ, ಅಪ್ಪಣ್ಣ, ಮೂಗು ಸುರೇಶ್, ಕುರಿ ಸುನೀಲ್ ಮುಂತಾದವರು ನಟಿಸಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!