26ರಂದು ರಾಜ್ಯಾದ್ಯಂತ ತೆರೆಯ ಮೇಲೆ ಬರುತ್ತಿದೆ “ಸ್ಕೇರಿ ಫಾರೆಸ್ಟ್”

ಯುವ ಪಡೆಗಳು ಸೇರಿಕೊಂಡು ನಿರ್ಮಿಸಿರುವಂತಹ ವಿಭಿನ್ನ ಬಗೆಯ ಸಸ್ಪೆನ್ಸ್ , ಥ್ರಿಲ್ಲರ್ ಹಾಗೂ ಹಾರರ್ ಚಿತ್ರ “ಸ್ಕೇರಿ ಫಾರೆಸ್ಟ್” ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಜೆ ಪಿ ಎಂಟರ್ಟೈನ್ಮೆಂಟ್ ವರ್ಲ್ಡ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಸ್ಕ್ರೇರಿ ಫಾರೆಸ್ಟ್ ಚಿತ್ರವನ್ನು ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರೇಕ್ಷಕರ ಮುಂದೆ ತರಲಿದ್ದಾರೆ.

ಮೊದಲಿಗೆ ಕನ್ನಡದಲ್ಲಿ ಈ ವಾರ ಬಿಡುಗಡೆಯಾಗುತ್ತಿದ್ದು , ಈ ಚಿತ್ರವನ್ನ ಮುಂಬೈಯಲ್ಲಿ ನೆಲೆಸಿರುವ ಕನ್ನಡಿಗ ನಿರ್ಮಾಪಕ ಜಯಪ್ರಭು. ಆರ್. ಲಿಂಗಾಯತ್ ನಿರ್ಮಿಸಿದ್ದಾರೆ. ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿ ಆಯೋಜಿಸಲಾಗಿತ್ತು. ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಪ್ರದರ್ಶಿಸಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯಜಮಾನ ಚಿತ್ರದ ನಿರ್ಮಾಪಕ ರೆಹಮಾನ್ , ನಿರ್ದೇಶಕ ಎಚ್ .ವಾಸು , ಉದ್ಯಮಿ ಭವ್ಯ ಗೌಡ ಸೇರಿದಂತೆ ಹಲವು ಗಣ್ಯರು ಆಗಮಿಸಿ ಚಿತ್ರ ತಂಡದ ಪ್ರಯತ್ನಕ್ಕೆ ಶುಭವಾಗಲಿ , ಸಿನಿಮಾ ಯಶಸ್ಸಿನತ್ತ ಸಾಗಲಿ ಮುಂದೆ ಹಲವಾರು ಚಿತ್ರಗಳು ನಿರ್ಮಿಸಲಿ ಎಂದು ಶುಭಕೋರಿದರು.

ಈ ಚಿತ್ರದಲ್ಲಿ ನಟನಾಗಿ ಬೆಳ್ಳಿಪರದೆಯನ್ನು ಪ್ರವೇಶಿಸುತ್ತಿರುವ ಜಯಪ್ರಭು ಮಾತನಾಡುತ್ತಾ ಹಲವು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ಇದೀಗ ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬ ಕಾರಣಕ್ಕೆ ಬಂದಿದ್ದೇನೆ. ಬಾಲಿವುಡ್ ನಲ್ಲಿ ಒಂದಷ್ಟು ಜನರ ಪರಿಚಯ ಇದ್ದಿದ್ದರಿಂದ ಅವರನ್ನೂ ಈ ಪ್ರಾಜೆಕ್ಟ್ ನಲ್ಲಿ ಸೇರಿಸಿ ಕೊಂಡಿದ್ದೇನೆ.

ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ಇಲ್ಲಿ ನಾನು ಜೈ ಎಂಬ ಕಾಲೇಜು ಸ್ಟುಡೆಂಟ್ ಪಾತ್ರ ಮಾಡಿದ್ದೇನೆ. ರಿಸರ್ಚ್ ಮಾಡಲು ಕಾಡಿಗೆ ಹೋಗುವ ಯುವಕರು ಏನೆಲ್ಲಾ ವಿಚಿತ್ರಗಳನ್ನು ಅನುಭವಿಸುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ, ಹಾರರ್ ಅಂಶದ ಜತೆಗೆ ಟ್ರಯಾಂಗಲ್ ಲವ್ ಸ್ಟೋರಿಯೂ ಸಿನಿಮಾದಲ್ಲಿದೆ. ಬಹಳಷ್ಟು ನಿರೀಕ್ಷೆಯೊಂದಿಗೆ ಈ ರಂಗಕ್ಕೆ ಬಂದಿದ್ದೇನೆ. ಇನ್ನು ಮುಂದೆ ಹಲವಾರು ಚಿತ್ರಗಳನ್ನು ನಿರ್ಮಿಸುವ ಬಯಕೆಯಿದೆ ನಿಮ್ಮೆಲ್ಲರ ಬೆಂಬಲ ಸಹಕಾರ ಇರಲಿ ಎಂದು ಕೇಳಿಕೊಂಡರು.

2 ಭಾಷೆಯಲ್ಲಿ ನಿರ್ಮಾಣ ವಾಗಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದಿದೆ. ಈ “ಸ್ಕೇರಿ ಫಾರೆಸ್ಟ್” ಚಿತ್ರದ ಕತೆಗೆ ಸೂಕ್ತವಾಗಿದ್ದರಿಂದ ಈ ತಂಡ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿ, ಉಳಿದಿದ್ದನ್ನ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿಕೊಂಡಿದೆ.

ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಬಾಲಿವುಡ್ ನಲ್ಲಿ‌ ಅನುಭವ ಹೊಂದಿರುವ ಸಂಜಯ್ ಅಭೀರ್ ನಿರ್ದೇಶನದ ಜೊತೆಗೆ‌ ಕಥೆ , ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಇದು ಪಕ್ಕಾ ಮನರಂಜಾನಾತ್ಮಕ ಸಿನಿಮಾ, ಹಾರರ್ , ಕಾಮಿಡಿ, ಲವ್, ಸೆಂಟಿಮೆಂಟ್ ಎಲ್ಲವು ಚಿತ್ರದಲ್ಲಿ ಇದೆಯಂತೆ.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿಂದಿಯ ಖ್ಯಾತ ನಟ ಜೀತ್ ರಾಯ್ ಕಾಣಿಸಿಕೊಂಡಿದ್ದಾರೆ. ಬಹುಭಾಷ ನಟ ಯಶ್ ಪಾಲ್ ಶರ್ಮ ಪ್ರಮುಖ ಪಾತ್ರದಲ್ಲಿ ನಟಿಸಿದ್ದು , ಕೊಡಗಿನ‌ ಟೀನಾ ಪೊನ್ನಪ್ಪ , ಆಮ್‌ ರೀನ್, ಕಲ್ಪನ‌ ಈ ಚಿತ್ರದ ನಾಯಕಿಯರಾಗಿ ಬೆಳ್ಳಿಪರದೆ ಮೇಲೆ ಮಿಂಚಲಿದ್ದಾರೆ. ಮತ್ತೊಂದು ವಿಶೇಷವೇನೆಂದರೆ ನಿರ್ಮಾಪಕರ ಪುತ್ರಿ ಬೇಬಿ ಪೂಜಾ ಸಹ ಈ‌ ಚಿತ್ರದ ಪ್ರಮುಖಪಾತ್ರದಲ್ಲಿ‌ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಆದಿ ಹಾಗೂ ಎಲ್.ಕೆ. ಲಕ್ಷ್ಮೀಕಾಂತ್ ಸಂಗೀತ ನೀಡಿದ್ದಾರೆ. ನರೇನ್ ಗೇಡಿಯಾ ಅವರ ಛಾಯಾಗ್ರಹಣ, ರಾಜೇಶ್ ಶಾ ಸಂಕಲನ ಹಾಗೂ‌ ದೀಪಕ್ ಶರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಒಟ್ಟಾರೆ ಬಹಳಷ್ಟು ನಿರೀಕ್ಷೆಯೊಂದಿಗೆ ತೆರೆ ಮೇಲೆ ಬರುತ್ತಿರುವ “ಸೇರಿ ಫಾರೆಸ್ಟ್” ಸಿನಿಪ್ರಿಯರನ್ನ ಸೇಳೆಯಲು ಸನ್ನದ್ಧರಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!