‘ಒಂದು ಶಿಕಾರಿಯ ಕಥೆ’ ಖ್ಯಾತಿಯ ನಿರ್ದೇಶಕ ಸಚಿನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸಮುದ್ರ ಮಂಥನ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕುಂದಾಪುರ, ಶಿವಮೊಗ್ಗ ಭಾಗಗಳಲ್ಲಿ ಚಿತ್ರೀಕರಣವನ್ನು ಚಿತ್ರತಂಡವು ಇದೀಗ ಯಶಸ್ವಿಯಾಗಿ ಮುಗಿಸಿ ಕುಂಬಳಕಾಯಿ ಹೊಡೆದಿದೆ.
ಸಮುದ್ರ ಮಂಥನ ಚಿತ್ರದಲ್ಲಿ ಯಶವಂತ್ ಕುಮಾರ್ ಮತ್ತು ಮಂದಾರ ಬಟ್ಟಲಹಳ್ಳಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕರಾವಳಿ-ಮಲೆನಾಡಿನ ಹಸಿರು ಗದ್ದೆ, ಸಮುದ್ರತೀರದಂತಹ ಸುಂದರ ಸ್ಥಳಗಳಲ್ಲದೆ, ದಟ್ಟ ಕಾಡು, ಬೆಟ್ಟ-ಗುಡ್ಡಗಳ ದುರ್ಗಮ ತಾಣಗಳಲ್ಲಿ ಸುಮಾರು 34 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಕಣ್ಣಿಗೆ ಹಬ್ಬವೆನಿಸುವ ದೃಶ್ಯಾವಳಿಗಳನ್ನು ಸೆರೆಹಿಡಿದಿರುವ ಸಂತಸವನ್ನು ಚಿತ್ರತಂಡ ಹಂಚಿಕೊಂಡಿದೆ.

ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಗಟ್ಟಿಕಥಾವಸ್ತುವಿನ ಜೊತೆಗೆ ಮನರಂಜನೆಗೂ ಒತ್ತುಕೊಡಲಾಗಿದೆ. ಸಿನಿಮಾದಲ್ಲಿ ಒಟ್ಟು 6 ಆಕ್ಷನ್ ಸೀಕ್ವೆನ್ಸ್ ಮತ್ತು 3 ಹಾಡುಗಳಿವೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ತಂಡವು ಮುನ್ನುಡಿ ಇಟ್ಟಿದ್ದು , ಮುಂದಿನ ವರ್ಷದ ಮೊದಲಾರ್ಧದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
ಸಮುದ್ರ ಮಂಥನ ಚಿತ್ರಕ್ಕೆ ಯೋಗೇಶ್ ಗೌಡ ಛಾಯಾಗ್ರಾಹಣ, ಬಿ.ಎಸ್ ಕೆಂಪರಾಜು ಸಂಕಲನ, ಯೋಗಾನಂದ D C ಸಾಹಸ ವಿಭಾಗ ನಿರ್ವಹಿಸಿದ್ದು, ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಮತ್ತು ಮನೋಜ್ ಚಂದ್ರಕಾಂತ್ – ನಿಶಾಂತ್ ಮಧುಗಿರಿ ಜೋಡಿಯ ಸಂಗೀತ ಒದಗಿಸುತ್ತಿದ್ದಾರೆ.
ರಫ್ ಕಟ್ ಪ್ರೊಡಕ್ಷನ್ ನಿರ್ಮಾಣ ಜವಾಬ್ದಾರಿ ಹೊತ್ತಿದ್ದು, ಎ ಸ್ಕ್ವೇರ್ ಪಿಕ್ಚರ್ಸ್ ಮತ್ತು ಆರುಷ್ ಪಿಕ್ಚರ್ಸ್ ಸಹಭಾಗಿತ್ವವಿದೆ. ಸ್ಕಂದ ಅಶೋಕ್, ನವೀನ್ ಶೆಟ್ಟಿ, ಶಿವಪ್ರಕಾಶ್ ಪೂಂಜಾ, ರಮೇಶ್ ರೈ, ಗುರುರಾಜ್ ಶೆಟ್ಟಿ, ಶ್ರೀಕಾಂತ್, ರೂಪಾ ಶೆಟ್ಟಿ ಮುಂತಾದವರು ಚಿತ್ರದ ತಾರಾಗಣದ ಭಾಗವಾಗಿದ್ದಾರೆ.





Be the first to comment