ಶಿರಡಿ ಸಾಯಿ ಬಾಬಾ ಜೀವನ ಕಥೆ ಆಧಾರಿತ ಚಿತ್ರ ‘ಸದ್ಗುರು’

ಶಿರಡಿ ಸಾಯಿ ಬಾಬಾ ಜೀವನ ಕಥೆ ಆಧಾರಿತ ‘ಸದ್ಗುರು’ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ. ವಿಕ್ರಮಾದಿತ್ಯ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಮಕ್ಕಳ ಮೂಲಕ ಶಿರಡಿ ಸಾಯಿ ಬಾಬಾ ಕಥೆಯನ್ನು ‘ಸದ್ಗುರು’ ಸಿನಿಮಾ ಮೂಲಕ ಹೇಳಲಾಗಿದೆ. ಇಂದು ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಿದೆ.

ಸಹನಾ ಆರ್ಟ್ಸ್ ಬ್ಯಾನರ್ ನಡಿ ವಿಕ್ರಮಾದಿತ್ಯ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಸಾಯಿ ಬಾಬಾ ಜೀವನ ಕುರಿತಾದ ಸಿನಿಮಾ ಇದಾಗಿದೆ. ಜನವರಿ 5ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. 5ರಿಂದ 14 ವರ್ಷದ ಧಾರವಾಡದ ರಂಗಭೂಮಿ ಮಕ್ಕಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಂಜನಾ ಗೋರ್ಪಡೆ ಸಾಯಿ ಬಾಬಾ ಪಾತ್ರ ನಿರ್ವಹಿಸಿದ್ದು, ದಿಗಂತ್ ತುಬ್ರಬುದ್ದಿ, ತುಳಸಿ ಮುಕಾಶಿ, ಸುಮಿತ್ ಭಜಂತ್ರಿ, ಸಹನಾ, ಸಂಕೇತ್ ಬಂಕಾಪುರ, ಸಾನ್ವಿ, ನಮನ್ ಕನವಳ್ಳಿ ಹಿರೇಮಠ್, ಆರಾದ್ಯ ರಜಪೂತ್, ಲಿತಿಕಾ ಯರಗಟ್ಟಿ ಸೇರಿದಂತೆ ಹಲವು ಮಕ್ಕಳು ಚಿತ್ರದ ಮುಖ್ಯ ತಾರಾಬಳಗದಲ್ಲಿದ್ದಾರೆ.

ಜೂನ್ ನಲ್ಲಿ ಚಿತ್ರೀಕರಣ ಆರಂಭಿಸಿ 30 ದಿನಗಳ ಕಾಲ ಧಾರವಾಡದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದೀಗ ಸಿನಿಮಾ ಕೆಲಸಗಳು ಪೂರ್ಣಗೊಂಡಿದ್ದು ಜನವರಿ 5ರಂದು ಸಿನಿಮಾ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಬಹಳ ಆಸಕ್ತಿ ಇತ್ತು. ನಿರ್ದೇಶಕನಾಗಬೇಕು, ಕಲಾವಿದನಾಗಬೇಕು ಎಂಬ ಆಸೆ ಇತ್ತು, ರಂಗಭೂಮಿ ಕಲಾವಿದ ಕೂಡ ಹೌದು. ಎಂಬಿಎ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿರ್ದೇಶಕ ವಾಸುದೇವ್ ಆಲೂರು ನನ್ನ ಗುರುಗಳು ಅವರ ಬಳಿ ಸಹಾಯಕ ನಿರ್ದೇಶಕನಾಗಿ ನೇಗಿಲ ಯೋಗಿ ಸಿನಿಮಾಗೆ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಬೇಕು ಎಂದು ಬಹಳ ವರ್ಷಗಳಿಂದ ಅಂದುಕೊಂಡಿದ್ದೆ, ಆದ್ರೆ ಆರು ವರ್ಷದ ನಂತರ ಆ ಕನಸು ‘ಸದ್ಗುರು’ ಚಿತ್ರದಿಂದ ಈಡೇರಿದೆ ಎಂದು ನಿರ್ದೇಶಕ ವಿಕ್ರಮಾದಿತ್ಯ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಸಾಯಿ ಬಾಬಾ ಪಾತ್ರಧಾರಿ ಸಂಜನಾ ಗೋರ್ಪಡೆ ಮಾತನಾಡಿ ಸಿನಿಮಾದಲ್ಲಿ ನಟಿಸಬೇಕು ಎಂದು ಆಸೆ ಇತ್ತು. ಆ ಕಾರಣಕ್ಕೆ ಅಭಿನಯ ಶಾಲೆ ಸೇರಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಈ ಸಿನಿಮಾಗೆ ಆಡಿಷನ್ ಮೂಲಕ ಆಯ್ಕೆಯಾದೆ. ಸಾಯಿ ಬಾಬಾ ಪಾತ್ರ ನಿರ್ವಹಿಸಲು ನಿರ್ದೇಶಕರು ಆರಂಭದಲ್ಲಿ ನನಗೆ ತರಭೇತಿ ನೀಡಿದ್ರು. ಆರಂಭದಲ್ಲಿ ಭಯ ಆಗ್ತಿತ್ತು. ನಿರ್ದೇಶಕರು, ಗುರುಗಳ ಸಹಕಾರದಿಂದ ಈ ಪಾತ್ರವನ್ನು ನಿರ್ವಹಿಸಿದ್ದೇನೆ ಎಂದು ಸಂಜನಾ ಗೋರ್ಪಡೆ ತಮ್ಮ ಮೊದಲ ಸಿನಿಮಾ ಅನುಭವ ಹಂಚಿಕೊಂಡ್ರು. ವಿನು ಮನಸು ಸಂಗೀತ ನಿರ್ದೇಶನ, ಯತೀಶಕುಮಾರ್ ವಿ, ಅಜಯ್ ಮಂಜು ನಾಯ್ಡು ಕ್ಯಾಮೆರಾ ನಿರ್ದೇಶನ ‘ಸದ್ಗುರು’ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!