ಬರಲಿದೆ ಭೂಗತ ದೊರೆಯ ಚಿತ್ರ

ಭೂಗತ ಜಗತ್ತಿನ ಡಾನ್ ಒಬ್ಬರ ಬದುಕಿನ ಕುರಿತ ಚಿತ್ರ ತೆರೆಯ ಮೇಲೆ ತರಲು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮುಂದಾಗಿದ್ದಾರೆ.

ಈ ಸಂಬಂಧ ಉಪೇಂದ್ರ ಜೊತೆ ಹೊಸ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದಾರೆ. ಸಿನಿಮಾದ ಟೈಟಲ್ ಪೋಸ್ಟರ್ ಸಹ ಬಿಡುಗಡೆ ಆಗಿದೆ.
2020ರಲ್ಲಿ ಮೃತಪಟ್ಟ ಡಾನ್, ಜೈ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಜೀವನ ಕುರಿತ ಚಿತ್ರ ಇದಾಗಿದೆ ಎನ್ನಲಾಗಿದೆ. ಉಪೇಂದ್ರ ಅವರು ಮುತ್ತಪ್ಪ ರೈ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದ್ದು ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ನೇರವಾಗಿ ಯಾರ ಬದುಕಿನ ಚಿತ್ರ ಎಂದು ಹೇಳಿಲ್ಲ. ಆದರೆ ದಾವೂದ್ ಇಬ್ರಾಹಿಂ ಸಹ ಈ ವ್ಯಕ್ತಿಯ ಸಹಾಯ ಪಡೆದಿದ್ದಾನೆ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

ಮುತ್ತಪ್ಪ ರೈ ಜೀವನವನ್ನು ಸಿನಿಮಾ ಮಾಡುವುದಾಗಿ ಕೆಲ ವರ್ಷಗಳ ಹಿಂದೆ ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದರು. ಮುತ್ತಪ್ಪ ರೈ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ನಟಿಸಲಿದ್ದಾರೆ ಎಂದಿದ್ದರು. ಆದರೆ ಸಿನಿಮಾ ಸೆಟ್ಟೇರಲಿಲ್ಲ. ಈಗ ಮುತ್ತಪ್ಪ ರೈ ಪಾತ್ರದಲ್ಲಿ ಉಪೇಂದ್ರ ನಟಿಸಲಿದ್ದಾರೆ.

ಈ ಸಿನಿಮಾ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡು ಬಿಡುಗಡೆ ಆಗಲಿದೆ. ರಾಮ್ ಗೋಪಾಲ್ ವರ್ಮಾ ಅವರು ಈ ಹಿಂದೆ ಹಲವು ಅಂಡರ್‌ವರ್ಲ್ಡ್‌ ಸಿನಿಮಾಗಳನ್ನು ಮಾಡಿದ್ದಾರೆ. ಈ ಸಿನಿಮಾಕ್ಕೆ ಆರ್ ಎಂದು ಹೆಸರು ಇಡಲಾಗಿದೆ.
ಉಪೇಂದ್ರ ಸಾಕಷ್ಟು ಬಿಜಿ ಆಗಿದ್ದು ಆರ್.ಚಂದ್ರು ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ‘ಕಬ್ಜ’ದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮುಖ್ಯ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ.
ಉಪೇಂದ್ರ ತಮ್ಮದೇ ನಿರ್ದೇಶನದ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಉಪ್ಪಿ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾ ಏಪ್ರಿಲ್ 1 ರಂದು ತೆರೆಗೆ ಬರಲಿದೆ. ಅಲ್ಲದೇ ಉಪ್ಪಿ ಅಭಿನಯದ ತೆಲುಗು ಸಿನಿಮಾ ‘ಗನಿ’ ಏಪ್ರಿಲ್ 8 ರಂದು ತೆರೆ ಕಾಣಲಿದೆ.
ಉಪೇಂದ್ರ ನಟಿಸಿರುವ ‘ತ್ರಿಶೂಲಂ’, ‘ಬುದ್ಧಿವಂತ 2’ ಹಾಗೂ ‘ಲಗಾಮ್’ ಸಿನಿಮಾಗಳು ಬಿಡುಗಡೆ ಆಗಬೇಕಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!