ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆರೋಪಿತರ ವಿರುದ್ಧ ಸಾಕ್ಷ್ಯ ವಿಚಾರಣೆ ಇಂದಿನಿಂದ ಆರಂಭವಾಗಲಿದೆ.
ಇಂದಿನ ವಿಚಾರಣೆಯಲ್ಲಿ ರೇಣುಕಾಸ್ವಾಮಿ ಹಿನ್ನೆಲೆ, ಕೊನೆಯ ಭೇಟಿ, ಅಪಹರಣದ ಸಂದರ್ಭ, ಶವ ಪತ್ತೆಯಾದ ವಿವರಗಳನ್ನು ತಂದೆ–ತಾಯಿ ಕೋರ್ಟ್ ಮುಂದೆ ವಿವರಿಸುವ ನಿರೀಕ್ಷೆ ಇದೆ. ಅವರ ಹೇಳಿಕೆಗಳ ಬಳಿಕ ಆರೋಪಿಗಳ ಪರ ವಕೀಲರು ಪಾಟೀಸವಾಲಿಗೆ ಅವಕಾಶ ಕೋರುವ ಸಾಧ್ಯತೆ ಇದೆ. ಈ ಇಬ್ಬರ ಸಾಕ್ಷ್ಯ ಪೂರ್ಣಗೊಂಡ ಬಳಿಕ ಇತರ ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುತ್ತದೆ.
ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದು, ಪ್ರತಿಯೊಬ್ಬ ಸಾಕ್ಷಿಯನ್ನು ಆರೋಪಿಗಳ ಪರ ವಕೀಲರು ಪಾಟೀಸವಾಲಿಗೆ ಒಳಪಡಿಸಲಿದ್ದಾರೆ. ಬಳಿಕ ಆರೋಪಿಗಳ ಹೇಳಿಕೆ ದಾಖಲಿಸುವುದು, ಸಾಕ್ಷ್ಯ ಒದಗಿಸಲು ಅವಕಾಶ ನೀಡುವುದು ಹಾಗೂ ಅಂತಿಮ ವಾದಮಂಡನೆ ನಡೆಯಲಿದೆ. ಈ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ಸಮಯ ಬೇಕಾಗುವ ಸಾಧ್ಯತೆ ಇದೆ.
ಮೊದಲ ಹಂತದಲ್ಲಿ ರೇಣುಕಾಸ್ವಾಮಿ ತಂದೆ ಮತ್ತು ತಾಯಿ ಸಾಕ್ಷ್ಯ ನೀಡಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದ ವಿಚಾರಣೆ ರಾಜ್ಯದಾದ್ಯಂತ ಗಮನ ಸೆಳೆಯಲಿದೆ.
—–





Be the first to comment