ಆಯುಷ್ ಮಲ್ಲಿ ನಿರ್ದೇಶಿಸಿರುವ ‘ಪಪ್ಪಿ’ ಸಿನಿಮಾದ ತೆಲುಗು ರೈಟ್ಸ್ ಖರೀದಿಸುವ ಬಗ್ಗೆ ರಾಣಾ ದಗ್ಗುಬಾಟಿ ಆಸಕ್ತಿ ತೋರಿದ್ದಾರೆ.
‘ರಾಣಾ ದಗ್ಗುಬಾಟಿ ಅವರ ಆಫೀಸಿನಿಂದ ಕರೆ ಬಂದಾಗ ಅಚ್ಚರಿಯಾಯಿತು. ಅವರಂಥ ವ್ಯಕ್ತಿಗಳು ನಮ್ಮ ಸಿನಿಮಾಕ್ಕೆ ನೀಡುವ ಬೆಂಬಲ ನನ್ನಂಥ ತರುಣರಿಗೆ ಸ್ಫೂರ್ತಿಯಾಗುತ್ತದೆ. ನಮ್ಮ ಸಿನಿಮಾದ ಟ್ರೇಲರ್ ನೋಡಿ ರಾಣಾ ದಗ್ಗುಬಾಟಿ ಮೆಚ್ಚುಗೆಯ ಮಾತನ್ನಾಡಿ ಸಿನಿಮಾದ ತೆಲುಗು ರೈಟ್ಸ್ ಖರೀದಿಸುವ ಬಗ್ಗೆ ಆಸಕ್ತಿ ತೋರಿದ್ದಾರೆ’ ಎಂದು ‘ಪಪ್ಪಿ’ ಸಿನಿಮಾ ನಿರ್ದೇಶಕ ಆಯುಷ್ ಮಲ್ಲಿ ಹೇಳಿದ್ದಾರೆ.
‘ರಾಜ್ ಬಿ ಶೆಟ್ಟಿ ಸಿನಿಮಾದ ಟ್ರೇಲರನ್ನು ಮೆಚ್ಚಿ ಏನೇ ಹೆಲ್ಪ್ ಬೇಕಿದ್ದರೂ ಕೇಳಿ ಎಂದು ಬೆನ್ನು ತಟ್ಟಿದ್ದಾರೆ. ರಮ್ಯಾ ಮೇಡಂ ಬೆಂಬಲಿಸುವ ಮಾತನ್ನಾಡಿದ್ದಾರೆ. ಇವೆಲ್ಲ ನಮಗೆ ಬಹಳ ಚೈತನ್ಯ ನೀಡಿದೆ’ ಎಂದು ಆಯುಷ್ ಮಲ್ಲಿ ಹೇಳಿದ್ದಾರೆ.
‘ಪಪ್ಪಿ’ ಸಿನಿಮಾ ಮೇ 1ರಂದು ತೆರೆಗೆ ಬರಲಿದೆ. ಧ್ರುವ ಸರ್ಜಾ ಈ ಸಿನಿಮಾವನ್ನು ಅರ್ಪಣೆ ಮಾಡುತ್ತಿದ್ದಾರೆ. 1 ಗಂಟೆ 50 ನಿಮಿಷ ಅವಧಿಯ ವಲಸೆ ಕಾರ್ಮಿಕರ ಬದುಕಿನ ಸುತ್ತ ಸಾಗುವ ‘ಪಪ್ಪಿ’ ಸಿನಿಮಾ ಉತ್ತರ ಕರ್ನಾಟಕ ಭಾಷೆಯಲ್ಲಿ ಇಬ್ಬರು ಬಾಲಕರ ನಿರೂಪಣೆಯಲ್ಲಿ ಸಾಗುತ್ತದೆ. ಉತ್ತರ ಕರ್ನಾಟಕದ ಜವಾರಿ ಸೊಗಡಿನ ಸಂಭಾಷಣೆಯಲ್ಲಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬರುವ ಕಾರ್ಮಿಕರ ಬದುಕು, ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸಂಬಂಧದ ಬಗ್ಗೆ ಬೆಳಕು ಚೆಲ್ಲುವ ಯತ್ನ ಮಾಡಲಾಗಿದೆ.
ಈ ಚಿತ್ರದಲ್ಲಿ ಹಾಸ್ಯ, ಎಮೋಷನ್ಸ್ ಜೊತೆಗೆ ಗಂಭೀರ ವಿಚಾರವನ್ನು ಹೇಳುವ ಯತ್ನ ಮಾಡಲಾಗಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕಿನಲ್ಲಿ, ಕೊಪ್ಪಳದ ಗುನ್ನಾಳದಲ್ಲಿ 15 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಬಾಲ ನಟರಾದ ಪರಶುರಾಮ, ಆದಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
—-

Be the first to comment