ಹೊಸ ಸಾಹಸಕ್ಕೆ ಮುಂದಾದ ‘ರಾಮಾ ರಾಮಾ ರೇ’ ನಿರ್ದೇಶಕ

ಕನ್ನಡ ಚಿತ್ರರಂಗದಲ್ಲಿ ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲಾ ಎರಡಲ್ಲಾ’ ಎಂಬ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಡಿ ಸತ್ಯಪ್ರಕಾಶ್ ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲುರೆಡಿಯಾಗಿದ್ದಾರೆ. ಇದರ ಜೊತೆಗೆ ತಮ್ಮ ಸಿನಿಮಾ ಸ್ನೇಹಿತರ ಜೊತೆ ಸೇರಿ ಸತ್ಯ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸಲಿದ್ದಾರೆ ಎನ್ನಲಾಗಿದೆ.

ಸತ್ಯ ಪಿಕ್ಚರ್ಸ್ ಸಂಸ್ಥೆ ವತಿಯಿಂದ ಈಗಾಗಲೇ ಸಿನಿಮಾ ನಿರ್ಮಾಣದ ಕೆಲಸಗಳು ಪ್ರಾರಂಭಗೊಂಡಿದ್ದು, ಇವರ ಜೊತೆಗೆ ಮಯೂರ ಮೋಷನ್ ಪಿಕ್ಚರ್ಸ್ ಸಂಸ್ಥಾಪಕರಾದ ಮಂಜುನಾಥ ದಾಸೇಗೌಡ ಕೂಡಾ ಕೈ ಜೋಡಿಸುತ್ತಿದ್ದಾರೆ. ಇವರು ‘ಉದ್ಘರ್ಷ’ ಚಿತ್ರಕ್ಕೆ ಸಹ ನಿರ್ಮಾಣ ಹಾಗೂ ‘ವೀಕೆಂಡ್’ ಚಿತ್ರವನ್ನು ನಿರ್ಮಿಸಿದ್ದಾರೆ. ಸತ್ಯ ಪಿಕ್ಚರ್ಸ್ ಹಾಗೂ ಮಯೂರ ಪಿಕ್ಚರ್ಸ್ ಜೊತೆ ಸೇರಿ ಒಟಿಟಿ ಮೂಲಕ ಉತ್ತಮ ಚಿತ್ರವನ್ನು ಸಿನಿಪ್ರಿಯರ ಮುಂದೆ ಇಡಲು ನಿರ್ಧರಿಸಿದ್ದಾರಂತೆ. ಎರಡೂ ಸಂಸ್ಥೆಗಳ ಸಹಯೋಗದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾವನ್ನು ಡಿ. ಸತ್ಯಪ್ರಕಾಶ್ ಅವರೇ ನಿರ್ದೇಶಿಸಲಿದ್ದಾರೆ. ‘ರಾಮಾ ರಾಮಾ ರೇ’ ಚಿತ್ರದ ತಾರಾಗಣ ಮತ್ತು ತಾಂತ್ರಿಕ ತಂಡ ಈ ಚಿತ್ರದಲ್ಲೂ ಮುಂದುವರೆಯಲಿದೆಯಂತೆ. ಕಥೆ, ಚಿತ್ರಕಥೆ ಮುಗಿಸಿ ಶೂಟಿಂಗಿಗೆ ಸಿದ್ಧವಾಗಿರುವ ಈ ಸಿನಿಮಾದ ಮತ್ತಷ್ಟು ವಿವರಗಳು ಸದ್ಯದಲ್ಲೇ ಹೊರಬೀಳಲಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!