“ರಾಣ” ಚಿತ್ರದ ಆಕ್ಷನ್ ಟ್ರೇಲರ್ ಬಿಡುಗಡೆ

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ “ರಾಣ” ಚಿತ್ರದ ಆಕ್ಷನ್ ಟ್ರೇಲರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಬಿಡುಗಡೆಯಾಗಿದೆ. ಶ್ರೇಯಸ್ ನನ್ನ ಆತ್ಮೀಯ ಗೆಳೆಯ. ಈ ಚಿತ್ರಕ್ಕಾಗಿ ಆತ ಪಟ್ಟಿರುವ ಶ್ರಮ ಟ್ರೀಲರ್ ನಲ್ಲಿ ಕಾಣುತ್ತಿದೆ‌‌. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಂಗಮದಲ್ಲಿ, ಕೆ.ಮಂಜು ಅವರ ಸಾರಥ್ಯದಲ್ಲಿ ಈ ಚಿತ್ರ ಚೆನ್ನಾಗಿ ಬಂದಿದೆ. ನಾನು ಮೊದಲ ದಿನ ನೋಡುತ್ತೇನೆ. ನೀವು ನೋಡಿ ಎಂದರು ಧ್ರುವ ಸರ್ಜಾ. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಸಹ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಸಿನಿಮಾ ನನ್ನ ಉಸಿರು. ಮೂರುವರೆ ವರ್ಷಗಳ(ಪಡ್ಡೆ ಹುಲಿ) ನಂತರ ನನ್ನ ಅಭಿನಯದ “ರಾಣ” ಸಿನಿಮಾ ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ. ಈ ದಿನಕ್ಕಾಗಿ ನಾನು ಕಾಯುತ್ತಿದೆ ಎಂದು ಶ್ರೇಯಸ್ ಭಾವುಕರಾದರು. ಟ್ರೇಲರ್ ಬಿಡುಗಡೆ ‌ಮಾಡಿ ಪ್ರೋತ್ಸಾಹ ನೀಡಿದ ಧ್ರುವ ಸರ್ಜಾ ಅವರಿಗೆ ಹಾಗೂ ಆಗಮಿಸಿದ ಗಣ್ಯರಿಗೆ ಶ್ರೇಯಸ್ ಧನ್ಯವಾದ ತಿಳಿಸಿದರು.

ಅವಕಾಶ ನೀಡಿದ್ದ ಕೆ.ಮಂಜು ಹಾಗೂ ಪುರುಷೋತ್ತಮ್ ಅವರಿಗೆ ಧನ್ಯವಾದ. ಚಿತ್ರ ಚೆನ್ನಾಗಿ ಬಂದಿದೆ ಎಂದರೆ ಆ ಕೀರ್ತಿ ನನ್ನ ಇಡೀ ತಂಡಕ್ಕೆ ಸೇರಬೇಕು. ಚಿತ್ರ ಆರಂಭದಿಂದ ಸಪೋರ್ಟ್ ಮಾಡುತ್ತಿರುವ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ನಂದಕಿಶೋರ್. “ಏಕ್ ಲವ್ ಯಾ” ಚಿತ್ರದ ನಂತರ “ರಾಣ” ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕಿ ರೀಷ್ಮಾ ನಾಣಯ್ಯ. ರಜನಿ ಭಾರದ್ವಾಜ್, ರಘು, ಮೋಹನ್ ಧನರಾಜ್ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಸಂಗೀತ ನಿರ್ದೇಶನದೊಂದಿಗೆ ಈ ಚಿತ್ರಕ್ಕೆ ರೀರೆಕಾರ್ಡಿಂಗ್ ಸಹ ಮಾಡಿರುವುದಾಗಿ ಚಂದನ್ ಶೆಟ್ಟಿ ತಿಳಿಸಿದರು. ಛಾಯಾಗ್ರಾಹಕ ಶೇಖರ್ ಚಂದ್ರ ಸಹ “ರಾಣ” ಕುರಿತು ಮಾತನಾಡಿದರು. ನಿಜವಾಗಲೂ “ರಾಣ” ಚಿತ್ರ ಚೆನ್ನಾಗಿದೆ‌.‌ 11.11.22 ಒಳ್ಳೆಯ ದಿನ ಈ ಚಿತ್ರ ಬಿಡುಗಡೆಯಾಗುತ್ತಿದೆ. ನನ್ನ ಮಗ ಸೇರಿದಂತೆ ಈಗ ಬರುತ್ತಿರುವ ಯವ ನಟರಿಗೆ ಒಳ್ಳೆಯ ಭವಿಷ್ಯವಿದೆ ಎಂದರು ಕೆ.ಮಂಜು.

ಕೆ.ಮಂಜು ಅವರ ಸಾರಥ್ಯದಲ್ಲಿ ಹಾಗೂ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ನೋಡಿ ಹರಿಸಿ ಎಂದು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಹೇಳಿದರು. ನಿರ್ಮಾಪಕರಾದ ಕೆ.ಸಿ.ಎನ್ ಕುಮಾರ್, ಸೂರಪ್ಪ ಬಾಬು, ರಮೇಶ್ ರೆಡ್ಡಿ, ಚೇತನ್ ಗೌಡ, ಕಡ್ಡಿಪುಡಿ ಚಂದ್ರು, ರೈತ ಕೇಶವ್ ಮತ್ತು ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು “ರಾಣ” ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!