ಸಾಲ ತೀರಿಸಲು ಕಿಡ್ನಾಪರ್ ಆದ ಪ್ರೊಡ್ಯೂಸರ್

ಸಿನಿಮಾ ತೋಪೆದ್ದ ಕಾರಣ ಸಾಲ ತೀರಿಸಲು ಹೆಣಗಾಡಿದ ಪ್ರೊಡ್ಯೂಸರ್ ಒಬ್ಬ ಉದ್ಯಮಿಯೊಬ್ಬರನ್ನು ಕಿಡ್ನಾಪ್ ಮಾಡಲು ಹೋಗಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಹಾಫ್ ಮೆಂಟಲ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದ ಶಶಿಕುಮಾರ್ ಕಿಡ್ನಾಪ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ವ್ಯಕ್ತಿ. ಈತ ಸಿನಿಮಾಕ್ಕೆ ಹಾಕಿದ ಸಾಲದ ಹಣ ತೀರಿಸಲು ಮಾಡಿದ ಅಪಹರಣ ಈಗ ಕಂಬಿ ಎಣಿಸುವಂತೆ ಮಾಡಿದೆ.

ಈರುಳ್ಳಿ ವ್ಯಾಪಾರಿ ಶ್ರೀನಿವಾಸ್ ಅವರನ್ನು ಅಪಹರಣ ಮಾಡಿದ ಶಶಿಕುಮಾರ್ ಮತ್ತು ತಂಡ, ನಾವು ಆದಾಯ ತೆರಿಗೆ ಇಲಾಖೆಗೆ ಸೇರಿದ್ದು, ನೀವು ತೆರಿಗೆ ವಂಚನೆ ಮಾಡಿದ್ದೀರಿ. 50 ಲಕ್ಷ ರೂಪಾಯಿ ದಂಡ ಕಟ್ಟಬೇಕು ಎಂದು ಹೇಳಿದ್ದಾರೆ. ಕೊನೆಗೆ ವ್ಯಾಪಾರಿ 20 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ಅವರಿಂದ ಬಿಡಿಸಿಕೊಂಡು ಬಂದಿದ್ದಾರೆ. ಆದರೆ ಮತ್ತೆ ಈರುಳ್ಳಿ ವ್ಯಾಪಾರಿಯನ್ನು ಸಂಪರ್ಕಿಸಿದ ತಂಡ, ಹೆಚ್ಚುವರಿ ಐದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟರು. ಇದರಿಂದ ಅನುಮಾನಗೊಂಡ ವ್ಯಾಪಾರಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ವೇಳೆ ಶಶಿಕುಮಾರ್ ಮತ್ತು ತಂಡ ಸಿಕ್ಕಿ ಬಿದ್ದಿದೆ.

ಶಶಿಕುಮಾರ್ ಸಿನಿಮೀಯ ಮಾದರಿಯಲ್ಲಿ ಅಪಹರಣ ಮಾಡಿದ್ದಾನೆ. ಈರುಳ್ಳಿ ವ್ಯಾಪಾರಿಯ ಕುಟುಂಬ, ಬ್ಯಾಂಕ್ ವಿವರ, ವಹಿವಾಟು, ಆಸ್ತಿ ಬಗ್ಗೆ ಮಾಹಿತಿ ಕಲೆ ಹಾಕುವ ಜೊತೆಗೆ ಸುಮಾರು 4 ಕಿ.ಮೀ.ವರೆಗೆ ವ್ಯಾಪಾರಿಯ ಕಾರನ್ನು ಹಿಂಬಾಲಿಸಿ ಅಪಹರಣ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಒಟ್ಟಿನಲ್ಲಿ ಸಿನಿಮಾದ ಶೋಕಿಯಿಂದ ಉಂಟಾದ ಸಾಲ, ಶಶಿಕುಮಾರ್ ಗೆ ಈಗ ಜೈಲಿನ ಕಡೆಗೆ ಹೋಗುವಂತೆ ಮಾಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!