ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಪದ್ಮಗಂಧಿ ಚಿತ್ರವೀಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಅಣಿಗೊಂಡಿದೆ. ಈ ಹಂತದಲ್ಲಿ ವಿಶಿಷ್ಟವಾದೊಂದು ರೀತಿಯಲ್ಲಿ ಚಿತ್ರತಂಡ ಮಾಧ್ಯಮದವರನ್ನು ಮುಖಾಮುಖಿಯಾಗುವ ಮೂಲಕ ಒಟ್ಟಾರೆ ಸಿನಿಮಾ ಬೆಗೆಗಿನ ಒಂದಷ್ಟು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಸದರಿ ಚಿತ್ರದ ನಿರ್ಮಾಪಕರೂ, ಕಥೆಗಾರರೂ ಆಗಿರುವ ಪ್ರೊ.ಎಸ್.ಆರ್ ಲೀಲಾ ಅವರು ಉಪಸ್ಥಿತರಿದ್ದು ಈ ಸಿನಿಮಾ ಶುರುವಾತಿನ ಬಗ್ಗೆ, ಕಥೆ ಹುಟ್ಟಿನ ಹಿಂದಿರೋ ಬೆರಗಿನ ಬಗ್ಗೆ ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಇದೇ ಹೊತ್ತಿನಲ್ಲಿ ಹಾಡುಗಳ ತುಣುಕುಗನ್ನೂ ಪ್ರದರ್ಶಿಸಲಾಗಿದೆ.
ಪದ್ಮಗಂಧಿಯ ಹಾಡುಗಳೆಲ್ಲವೂ ತಯಾರಾಗಿವೆ. ಅವುಗಳ ಒಂದಷ್ಟು ಝಲಕ್ಕುಗಳನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಲಾಗಿದೆ. ಈ ಮೂಲಕ ಪದ್ಮಗಂಧಿಯ ಹಾಡುಗಳ ಸಣ್ಣ ಪರಿಚಯವನ್ನು ಪ್ರೇಕ್ಷಕರತ್ತ ತಲುಪಿಸುವ ಪ್ರಯತ್ನವೂ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪದ್ಮಗಂಧಿಯ ಹಾಡುಗಳು ಸಂಪೂರ್ಣವಾಗಿ ಪ್ರೇಕ್ಷಕರ ಮುಂದೆ ಬರಲಿವೆ. ಈ ಸಂದರ್ಭದಲ್ಲಿ ಮಾತಾಡಿದ ಎಸ್.ಆರ್ ಲೀಲಾ ಅವರು ಪದ್ಮಗಂಧಿ ಎಂಬ ಶೀರ್ಷಿಕೆಯ ಹಿಂದಿರುವ ಗಹನವಾದ ಅಂಶಗಳನ್ನು ತೆರೆದಿಡುತ್ತಲೇ, ಕಮಲ ಪುಷ್ಪದ ಬಗೆಗಿನ ಬೆರಗಿನ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಈ ಹಂತದಲ್ಲಿ ಮೂಡಿಕೊಂಡ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.
ಇನ್ನುಳಿದಂತೆ, ಈ ಸಿನಿಮಾಕ್ಕಾಗಿ ವರ್ಷಾಂತರಗಳಿಂದ ಶ್ರಮ ವಹಿಸಿರುವ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರೂ ಕೂಡಾ ಪದ್ಮಗಂಧಿಯ ಬಗೆಗಿನ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು. ತಮ್ಮ ಕನಸಿನ ಕೂಸನ್ನು ಪ್ರೇಕ್ಷಕರ ಮಡಿಲಿಗಿಡುವ ಸಡಗರದಿಂದಲೇ ಸಿನಿಮಾ ಮತ್ತು ತಂಡದ ಬಗ್ಗೆ ಮಾತಾಡಿದ್ದಾರೆ. ಇದೀಗ ಪದ್ಮಗಂಧಿ ಎಲ್ಲ ರೀತಿಯಿಂದಲೂ ಸಂಪೂರ್ಣಗೊಂಡಿದೆ. ಆಗಸ್ಟ್ ತಿಂಗಳ ಹೊತ್ತಿಗೆಲ್ಲ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಎಂಎಲ್ಸಿಯಾಗಿ, ಪ್ರಾಧ್ಯಾಪಕಿಯಾಗಿ, ಅಂಕಣಕಾರ್ತಿಯಾಗಿ ಪ್ರಸಿದ್ಧರಾಗಿರುವ ಎಸ್ ಆರ್ ಲೀಲಾ ಅವರು ಬಹು ವರ್ಷಗಳ ಅಧ್ಯಯಯನದ ನಂತರ ಈ ಕಥೆಯನ್ನು ರೂಪಿಸಿದ್ದಾರೆ. ಸುಚೇಂದ್ರ ಪ್ರಸಾದ್ ಅವರೂ ಕೂಡಾ ಅಷ್ಟೇ ಆಸ್ಥೆಯಿಂದ ಅದಕ್ಕೆ ದೃಷ್ಯ ರೂಪ ನೀಡಿದ್ದಾರೆಂಬ ಮೆಚ್ಚುಗೆ ಲೀಲಾರ ಮಾತಿನಲ್ಲಿ ಧ್ವನಿಸುತ್ತಿತ್ತು.
ಪರಿಕಲ್ಪನೆ, ನಿರ್ಮಾಣ ಡಾ. ಎಸ್.ಆರ್ ಲೀಲಾ, ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಕ. ಸುಚೇಂದ್ರ ಪ್ರಸಾದ, ಡಾ. ದೀಪಕ್ ಪರಮಶಿವನ್ ಸಂಗೀತ, ಎನ್. ನಾಗೇಶ್ ನಾರಾಯಣಪ್ಪ ಸಂಕಲನ, ಮನು ಯಾಪ್ಲಾರ್ ಮತ್ತು ನಾಗರಾಜ್ ಅದ್ವಾನಿ ಛಾಯಾಗ್ರಹಣವಿರುವ ಈ ಚಿತ್ರ ಮಹಾಪದ್ಮ, ಮೃತ್ಯುಂಜಯ ಶಾಸ್ತ್ರಿ ಪರಿಪೂರ್ಣ, ಪಂಡಿತ ಪ್ರಸನ್ನ ವೈದ್ಯ, ಡಾ. ದೀಪಕ್ ಪರಮಶಿವನ್, ಹೇಮಂತ ಕುಮಾರ ಜಿ, ಮುಂತಾದವರ ತಾರಾಗಣದೊಂದಿಗೆ ಕಳೆಗಟ್ಟಿಕೊಂಡಿದೆ. ಶೀಘ್ರದಲ್ಲಿಯೇ ಚಿತ್ರತಂಡ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ.

Be the first to comment