ಸಿನಿಮಾ ಮಾಡುವುದಕ್ಕಿಂತ ಸಿನಿಮಾವನ್ನು ಜನರಿಗೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಕನ್ನಡ ಚಿತ್ರರಂಗದ ಸದ್ಯದ ಇಂಥಹ ಪರಿಸ್ಥಿತಿಯಲ್ಲಿ ನೋಡಿದವರು ಏನಂತಾರೆ ಚಿತ್ರ ಹಾಫ್ ಸೆಂಚುರಿಯತ್ತ ಸಾಗುತ್ತಿದೆ. ಈ ಮೂಲಕ ಒಂದೊಳ್ಳೆ ಕಂಟೆಂಟ್ ಸಿನಿಮಾವನ್ನು ಪ್ರೇಕ್ಷಕ ಯಾವತ್ತು ಕೈಬಿಡೋದಿಲ್ಲ ಎಂಬುವುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.
ನೋಡಿದವರು ಏನಂತಾರೆ ಸಿನಿಮಾ ಐವತ್ತನೇ ದಿನದತ್ತ ಸಾಗುತ್ತಿದೆ. ಚಿತ್ರತಂಡ ಇದೇ ಖುಷಿಯಲ್ಲಿ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಸುದ್ದಿ ಗೋಷ್ಟಿ ಆಯೋಜಿಸಿತ್ತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿ ಸಂತಸ ಹಂಚಿಕೊಂಡಿದೆ.
ನಿರ್ದೇಶಕ ಕುಲದೀಪ್ ಮಾತನಾಡಿ, ಒಂದು ಸಣ್ಣ ಕನಸಿನಿಂದ ಶುರುವಾದ ಪಯಣ ನೋಡಿದವರು ಏನಂತಾರೆ. ಅದು ಹೋಗ್ತಾ ಹೋಗ್ತಾ ಸಾಕಷ್ಟು ರೂಪಾಂತರ ಕಂಡು ತನ್ನದೇ ದಾರಿ ಕಂಡುಕೊಂಡು ಜನರ ಮುಂದೆ ಇಷ್ಟು ದೊಡ್ಡದಾಗಿ ನಿಲ್ಲುತ್ತದೆ ಎಂದುಕೊಂಡಿರಲಿಲ್ಲ. ನಮ್ಮ ಪಾಲಿಗೆ ಇದು ದೊಡ್ಡ ಯಶಸ್ಸು. ಈ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಧನ್ಯವಾದ ಎಂದು ಸಂತಸ ಹಂಚಿಕೊಂಡರು.
ನಾಯಕ ನವೀಶ್ ಶಂಕರ್, ಸಿನಿಮಾವನ್ನು ಮಾಡುವುದರಿಂದ ಹಿಡಿದು ಅದನ್ನು ತಲುಪಿಸುವ ಪ್ರತಿಯೊಂದು ಹಂತದವರೆಗೂ ಎಲ್ಲರಿಗೂ ಕನಸು ಇರುತ್ತದೆ. ಆದರೆ ಈ ಹಂತಕ್ಕೆ ತಲುಪುವುದು ಕೆಲವೇ ಕೆಲವು ಸಿನಿಮಾಗಳು ಮಾತ್ರ. ವರ್ಷದಲ್ಲಿ 200 ರಿಂದ 300 ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ನೆನಪಿನಲ್ಲಿ ಉಳಿಯುವಂತದ್ದು 10 ರಿಂದ 15 ಸಿನಿಮಾಗಳು ಮಾತ್ರ. ಈ ಲೀಸ್ಟ್ ನಲ್ಲಿ ನಾವು ಇದ್ದೇವೆ ಎನ್ನುವುದೇ ಖುಷಿ ಎಂದರು.
ನಿರ್ಮಾಪಕರಾದ ನಾಗೇಶ್ ಗೋಪಾಲ್ ಮಾತನಾಡಿ, ಎಲ್ಲರಿಗೂ ಯಾವ ರೀತಿ ಧನ್ಯವಾದ ತಿಳಿಸಬೇಕು ಎಂದು ಗೊತ್ತಿಲ್ಲ. ಕುಲದೀಪ್ ನನ್ನ ಸ್ನೇಹಿತ. ಈ ಚಿತ್ರವನ್ನು ನಮಗೆ ಕೊಟ್ಟಿದ್ದಕ್ಕೆ ಧನ್ಯವಾದ. ಇಡೀ ಚಿತ್ರತಂಡದ ಬೆಂಬಲದಿಂದ ಒಂದೊಳ್ಳೆ ಸಿನಿಮಾವಾಗಿದೆ. ನೋಡಿದವರು ಏನಂತಾರೆ ಸಿನಿಮಾವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.
ನೋಡಿದವರು ಏನಂತಾರೆ ಎಂಬ ಶೀರ್ಷಿಕೆಯೇ ಬಹಳ ವಿಶೇಷವಾಗಿದೆ. ಈ ಶೀರ್ಷಿಕೆಗೆ ತಕ್ಕಂತೆಯೇ ಇಡೀ ಕಥೆಯನ್ನು ಹೆಣೆಯಲಾಗಿದ್ದು, ಪ್ರೇಕ್ಷಕರು ಕೂಡ ಕಥೆ ಅಭಿನಯ ಅಪ್ಪಿಕೊಂಡಿದ್ದಾರೆ. ನಿರ್ದೇಶಕ ಕುಲದೀಪ್ ಕಾರಿಯಪ್ಪ ಬರೆದ ವಿಭಿನ್ನ ಕಥೆ ಮತ್ತು ಪಾತ್ರಕ್ಕೆ ನಾಯಕ ನವೀಶ್ ಶಂಕರ್ ಅಷ್ಟೇ ಅದ್ಭುತವಾಗಿ ಜೀವ ತುಂಬಿದ್ದಾರೆ.
ನಾಯಕಿ ಅಪೂರ್ವ ಭಾರದ್ವಾಜ್ ಸೊಗಸಾಗಿ ಅಭಿನಯಿಸಿದ್ದಾರೆ. ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಆಶ್ವಿನ್ ಕೆನೆಡಿ ಛಾಯಾಗ್ರಾಹಣ, ಮಯೂರೆಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದು, ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ಕುಲದೀಪ್ ಕಾರಿಯಪ್ಪ ಅವರು ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.

Be the first to comment