ಕೇಂದ್ರ ಸಚಿವ ಸುರೇಶ್ ಗೋಪಿ ನಟನೆಗೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು, ಸಚಿವ ಸ್ಥಾನಕ್ಕಿಂತ ಸಿನಿಮಾ ವೃತ್ತಿಜೀವನವನ್ನು ಮುಂದುವರಿಸಲು ಬಯಸುವುದಾಗಿ ಹೇಳಿದ್ದಾರೆ.
ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರ್ ಸಂಸದ ಆಗಿರುವ ಸುರೇಶ್ ಗೋಪಿ, ಸಚಿವ ಹುದ್ದೆಯನ್ನು ವಹಿಸಿಕೊಂಡ ನಂತರ ತಮ್ಮ ಆದಾಯ ಕಡಿಮೆಯಾಗಿದೆ. ಸಿನಿಮಾ ವೃತ್ತಿಜೀವನವನ್ನು ತೊರೆದು ಸಚಿವನಾಗಲು ತಮಗೆ ಇಷ್ಟವಿರಲಿಲ್ಲ. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಚಿಂತನೆ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ನಾನು ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಗಳಿಸಬೇಕಾಗಿದೆ. ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಅವರು ಹೇಳಿದ್ದಾರೆ.
ತಾವು ರಾಜೀನಾಮೆ ಸಲ್ಲಿಸಿದ ನಂತರ ತೆರವಾಗುವ ಸಚಿವ ಸ್ಥಾನವನ್ನು ರಾಜ್ಯಸಭಾ ಸಂಸದ ಸಿ ಸದಾನಂದನ್ ಮಾಸ್ಟರ್ ಅವರಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ನಾನು ಎಂದಿಗೂ ಸಚಿವನಾಗಬೇಕೆಂದು ಬಯಸಲಿಲ್ಲ. ಚುನಾವಣೆಗೆ ಒಂದು ದಿನ ಮೊದಲೂ ನಾನು ಸಚಿವನಾಗಲು ಬಯಸುವುದಿಲ್ಲ. ನಾನು ಸಿನಿಮಾದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸುರೇಶ್ ಗೋಪಿ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.





Be the first to comment