‘ನೈಂಟಿ ಹೊಡಿ ಮನೀಗ್ ನಡಿ’ ಟೈಟಲ್ ಸಾಂಗ್ ಶೂಟಿಂಗ್

ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಲ್ಲಿ, ರತ್ನಮಾಲಾ ಬಾದರದಿನ್ನಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಹಾಸ್ಯ ನಟ ಬಿರಾದಾರ್ ಮುಖ್ಯ ಭೂಮಿಕೆಯ ನೈಂಟಿ ಹೊಡಿ ಮನೀಗ್ ನಡಿ ಚಿತ್ರದ ಟೈಟಲ್ ಸಾಂಗ್ ಚಿತ್ರೀಕರಣವು ಇತ್ತೀಚೆಗೆ ಬೆಂಗಳೂರಿನ ಎಚ್ ಎಮ್ ಟಿ ಯಲ್ಲಿ ನೆರವೇರಿತು.

ಕಿರಣ್ ಶಂಕರ್ ಸಂಗೀತದ ಈ ಹಾಡಿಗೆ ಸಾಹಿತ್ಯ ಚತುರ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ. ಇನ್ನು ಚುಟು-ಚುಟು ಖ್ಯಾತಿಯ ಭೂಷಣ್ ಕೊರಿಯೋಗ್ರಫಿ ಮಾಡಿದ್ದು, ಕೃಷ್ಣ ನಾಯ್ಕರ್ ಛಾಯಾಗ್ರಹಣ ಮಾಡಿದ್ದಾರೆ.

ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಟೈಟಲ್ ಸಾಂಗ್ ಸೇರಿದಂತೆ ಚಿತ್ರದ ಮುಕ್ಕಾಲುಪಾಲು ಚಿತ್ರೀಕರಣ ಮುಗಿಸಲಾಗಿದೆ. ಮುಂದಿನ ಹಂತದ ಚಿತ್ರೀಕರಣ ಬಾಗಲಕೋಟೆ ಯಲ್ಲಿ ನಡೆಯಲಿದ್ದು ಚಿತ್ರತಂಡ ಸಜ್ಜಾಗುತ್ತಿದೆ ಎನ್ನುತ್ತಾರೆ ನಿರ್ದೇಶಕರು.

ಅದ್ಧೂರಿ ಸೆಟ್ ನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆದ ಈ ಎಣ್ಣೆ ಹಾಡಿಗೆ ಬಿರಾದಾರ್ ಜೊತೆ ಹಿರಿಯ ನಟ ಕರಿಸುಬ್ಬು, ಹಾಸ್ಯ ನಟ ಪ್ರಶಾಂತ್ ಸಿದ್ಧಿ, ಆರ್. ಡಿ ಬಾಬು, ವಿವೇಕ್ ಜಂಬಗಿ ಹೆಜ್ಜೆ ಹಾಕಿದ್ದಾರೆ. ನೈಂಟಿ ಹೊಡಿ ಮನೀಗ್ ನಡಿ ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ಹೇ.. ಒಲವಿನ ಚೆಲುವಿನ ಕುಡುಕರೆ ಕೇಳೀ.. ಈ ಕವಿತೆಯು ಸಮರ್ಪಣೆ ನಿಮಗೆ…

ಎಂದು ಶುರುವಾಗುವ ಈ ಹಾಡನ್ನು ಅಪರೂಪ ಎಂಬಂತೆ ಈವರೆಗೂ ಕನ್ನಡದಲ್ಲಿ ಐದು ಸಾವಿರಕ್ಕೂ ಹೆಚ್ಚು ಹಾಡಿಗೆ ಧ್ವನಿಯಾಗಿರುವ ಗಾಯಕ ರಾಜೇಶ್ ಕೃಷ್ಣನ್ ಟ್ರ್ಯಾಕ್ ಕೇಳಿ ಖುಷಿ ಪಟ್ಟು, ಸ್ವ- ಇಚ್ಛೆಯಿಂದ ಬಂದು ಧ್ವನಿ ನೀಡಿರುವುದು ಈ ಹಾಡಿನ ಹೆಗ್ಗಳಿಕೆಯಾಗಿದೆ.

ವಿಶೇಷವಾಗಿ ಸುಪ್ರಭಾತದ ರೇಂಜಿಗೆ ಪ್ರತಿ ಬಾರುಗಳಲ್ಲೂ ಸ್ವರ ಮೊಳಗ ಬೇಕೆಂಬ ಆಶಯವಿರುವ ಈ ಹಾಡು ಮದ್ಯಪ್ರೀಯರ ಎಣ್ಣೆ ಮೇಲಿನ ಅಭಿಮಾನ ಮತ್ತು ಎಣ್ಣೆಯ ಹೆಚ್ಚುಗಾರಿಕೆ ಹೇಳುವ ಹಾಡಾಗಿದ್ದು, ಪ್ರೇಕ್ಷಕ ಪ್ರಭುಗಳಿಗೆ ನಶೆ ಹತ್ತಿಸೋದು ಪಕ್ಕಾ ಅನ್ನೋದು ಚಿತ್ರತಂಡದ ನಂಬಿಕೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!