‘ರಾಜಮಾರ್ತಾಂಡ’ ಚಿರಂಜೀವಿ ಕೊನೆಯ ಚಿತ್ರ ಅಲ್ಲ ಎಂದ ಮೇಘನಾ ರಾಜ್

‘ರಾಜಮಾರ್ತಾಂಡ’ ಸಿನಿಮಾ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ಅಲ್ಲ ಎಂದು ಮೇಘನಾ ರಾಜ್ ಭಾವುಕರಾಗಿ ಹೇಳಿದ್ದಾರೆ.

ಅಕ್ಟೋಬರ್ 6 ರಂದು ‘ರಾಜಮಾರ್ತಾಂಡ’ ಸಿನಿಮಾ ರಿಲೀಸ್ ಆಗುತ್ತಿದೆ. ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ಆಗಿರುವ ‘ರಾಜಮಾರ್ತಾಂಡ’ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಕಮ್ಮಿಕೊಳ್ಳಲಾಗಿತ್ತು. ಈ ವೇಳೆ ಚಿರು ಸಿನಿಮಾ ಬಗ್ಗೆ ಪತ್ನಿ ಮೇಘನಾ ರಾಜ್, ಮಾವ ಸುಂದರ್ ರಾಜ್, ತಮ್ಮ ಧ್ರುವ ಸರ್ಜಾ ಭಾವುಕರಾಗಿ ಮಾತಾಡಿದ್ದಾರೆ.

“ಇದು ಚಿರು ಅವರ ಕನಸಿನ ಸಿನಿಮಾ ಆಗಿತ್ತು. ಈ ಸಿನಿಮಾ ಬಗ್ಗೆ ಅವರಿಗೆ ಪಾಸಿಟಿವ್ ವೈಬ್ ಇತ್ತು. ಪ್ರತಿದಿನ ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ಇವತ್ತು ಈ ರೀತಿ ಡೈಲಾಗ್ ಇತ್ತು. ಆ ರೀತಿ ಡೈಲಾಗ್ ಇತ್ತು ಎನ್ನುತ್ತಿದ್ದರು. ಅವರು ಯಾವ ಸಿನಿಮಾಗೂ ಹೀಗೆ ಡೈಲಾಗ್‌ ಕಲಿತು ಪ್ರಿಪೇರ್ ಹೋಗುತ್ತಿದ್ದದ್ದೂ ನೋಡಿರಲಿಲ್ಲ. ಧ್ರುವ ಡೈಲಾಗ್ ಪ್ರಾಕ್ಟೀಸ್ ಮಾಡಿ ಶೂಟಿಂಗ್‌ಗೆ ಹೋಗಿದ್ದು ನೋಡಿದ್ದೇವೆ. ಆದರೆ, ಚಿರು ಆ ರೀತಿ ಮಾಡಿದ ಮೊದಲ ಸಿನಿಮಾವಿದು” ಎಂದು ಮೇಘನಾ ರಾಜ್ ಹೇಳಿದ್ದಾರೆ.

“ಇದನ್ನು ಕೊನೆಯ ಚಿತ್ರ ಅಂತ ನಾವ್ಯಾರು ಫ್ಯಾಮಿಲಿಯಲ್ಲಿ ಅಂದುಕೊಂಡಿಲ್ಲ. ಅವರ ಮೊದಲನೇ ಚಿತ್ರ ಅಂತಾನೇ ನಾವು ಭಾವಿಸುತ್ತಿರೋದು. ಇದನ್ನು ಅವರ ಮೊದಲ ಸಿನಿಮಾ ಅಂತಾನೇ ನೋಡೋಣ. ಇದು ಹೊಸ ಅಧ್ಯಾಯ ಆಗಿರಲಿ ಅಂತಾನೇ ನಾವು ಭಾವಿಸುತ್ತೇವೆ. ಸಿನಿಮಾ ತಂಡಕ್ಕೆ, ಅದರಲ್ಲಿ ಆಕ್ಟ್ ಮಾಡಿರೋ ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಮೇಘನಾ ಶುಭ ಹಾರೈಸಿದ್ದಾರೆ.

“ರಾಜ ಮಾರ್ತಾಂಡನಾ ಕಡೇ ಸಿನಿಮಾ ಅಂತ ಕರೀಬೇಡಿ. ಇದು ಚಿರಂಜೀವಿ ಕೊಟ್ಟ ಕೊಡುಗೆಗೆ ಥ್ಯಾಂಕ್ಸ್ ಹೇಳುವ ಸಿನಿಮಾ ಅಂತ ಹೇಳಬೇಕಿದೆ. ಈ ಸಿನಿಮಾ ಯಶಸ್ಸನ್ನು ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದನಿಂದ ಹಿಡಿದು, ತಂತ್ರಜ್ಞರಿಂದ ಹಿಡಿದು, ನಿರ್ಮಾಪಕರಿಂದ ಹಿಡಿದು, ನಿರ್ದೇಶಕರಿಂದ ಹಿಡಿದು ಒಂದು ಗೌರವವನ್ನು ಕೊಡಬೇಕು.” ಎಂದು ಸುಂದರ್ ರಾಜ್ ಅಭಿಪ್ರಾಯ ಪಟ್ಟಿದ್ದಾರೆ.

‘ರಾಜಮಾರ್ತಾಂಡ’ 2017ರಲ್ಲಿ ಆರಂಭ ಆಗಿ 2023ಕ್ಕೆ ರಿಲೀಸ್ ಆಗುತ್ತಿದೆ. ನೂರೆಂಟು ಅಡೆ- ತಡೆಗಳನ್ನು ಎದುರಿಸಿ ಈ ತಿಂಗಳು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!