ಮೇ. 10 ಕ್ಕೆ“ತ್ರಯ” ಚಿತ್ರ ಬಿಡುಗಡೆ

ಯುವ ಪಡೆಗಳು ಸೇರಿಕೊಂಡು ನಿರ್ಮಿಸಿರುವಂತಹ ಮರ್ಡರ್ ಮಿಸ್ಟರಿಯ ಸಸ್ಪೆನ್ಸ್ ಕಥಾನಕ “ತ್ರಯ” ಚಿತ್ರ ಮುಂದಿನ ತಿಂಗಳು ಮೇ 10 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.ಸದಾ ಮೋಜು ಮಸ್ತಿಯಲ್ಲೇ ಬದುಕನ್ನು ದೂಡುವ ಗುಣವಿರುವ ಮೂವರು ಯುವಕರ ಪೈಕಿ ಒಬ್ಬನ ಜೀವನದಲ್ಲಿ ಹುಡುಗಿಯೊಬ್ಬಳ ಪ್ರವೇಶವಾಗುತ್ತದೆ, ಅಲ್ಲಿಂದ ಅವರ ಜೀವನದ ದಾರಿ ಎಲ್ಲೆಲ್ಲೋ ತೇಲುತ್ತದೆ, ಮುಂದೆ ಏನಾಗುತ್ತೆ ಎಂಬುದನ್ನು ಹೇಳುವ ಚಿತ್ರವೇ ತ್ರಯ.

ಈಗಾಗಲೇ ಮೂರು ತಮಿಳು ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣಸಾಯಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಇದಕ್ಕೆ ಅವರೇ ಕತೆ, ಚಿತ್ರಕಥೆಯನ್ನು ಒದಗಿಸಿದ್ದಾರೆ.ಕೌಶಲ್ ಮಹಾಜನ್ ಕನ್ನಡ ಸಿನಿಮಾ ಮಾಡಬೇಕೆಂದು ಪಣತೊಟ್ಟು ರಾಜ್ ಆನಂದ್ ಅವರೊಂದಿಗೆ ಸೇರಿ “ತ್ರಯ” ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆರ್. ಕೆ. ಪ್ರತಾಪ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅಶ್ವಿನ್ ಕಾರ್ತಿಕ್ ಅವರ ಸಾಹಿತ್ಯದ ನಾಲ್ಕು ಗೀತೆಗಳಿಗೆ ಟಾಲಿವುಡ್‍ನ ಯತೀಶ್ ಮಹದೇವ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಮೋಘ್ ರಾಹುಲ್, ಶಂಕರ್ ಶ್ರೀಹರಿ , ಮದನ್ ಗೌಡ , ನಿಮಿಷ , ಸಂಯುಕ್ತ ಹೊರನಾಡು, ರಜನಿ ಭಾರದ್ವಾಜ್ , ನೀತುಬಾಲ ಪ್ರಮುಖ ಪಾತ್ರದಲ್ಲಿದ್ದು , ಉಳಿದ ಪಾತ್ರಗಳಲ್ಲಿ ಕೃಷ್ಣ ಹೆಬ್ಬಳೇ , ಮನ್ ದೀಪ್ ರಾಯ್, ಟೆನಿಸ್ ಕೃಷ್ಣ, ವಿಜಯ್ ಚೆಂಡೂರ್ ಮುಂತಾದವರು ಅಭಿನಯಿಸಿದ್ದಾರೆ. ಈಗಾಗಲೇ ಈ ಚಿತ್ರದ 2 ಟ್ರೈಲರ್ ಭಾರೀ ಸದ್ದು ಮಾಡಿದ್ದು, 100 ನಿಮಿಷ ವಿರುವ ಈ ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ತ್ರಯ ಚಿತ್ರ ವೀಕ್ಷಕರಲ್ಲಿ ಕುತೂಹಲವನ್ನು ಮೂಡಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!