ವಿಭಿನ್ನ ಕಥಾಹಂದರದ “ಲೈನ್ ಮ್ಯಾನ್” ಚಿತ್ರಕ್ಕೆ ಚಾಮರಾಜನಗರದಲ್ಲಿ ಚಾಲನೆ‌.

“ಭಿನ್ನ” ದಂತಹ ವಿಭಿನ್ನ ಚಿತ್ರ ನಿರ್ಮಾಣ ಮಾಡಿದ್ದ ಪರ್ಪಲ್ ರಾಕ್ ಸಂಸ್ಥೆಯಿಂದ ಇತ್ತೀಚೆಗೆ “ಡಿಯರ್ ಸತ್ಯ” ಚಿತ್ರ ಸಹ ನಿರ್ಮಾಣವಾಗಿತ್ತು. ಈಗ ಸಂಸ್ಥೆಯ ಮೂರನೇ ಕಾಣಿಕೆಯಾಗಿ “ಲೈನ್ ಮ್ಯಾನ್” ಚಿತ್ರ ಆರಂಭವಾಗಿದೆ.

ಚಾಮರಾಜನಗರದ ಚಂದಕವಾಡಿಯಲ್ಲಿರುವ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಶಿವಕುಮಾರ್ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ ನಿರ್ಮಿಸುತ್ತಿರುವ ಈ ಚಿತ್ರವನ್ನು ರಘು ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ರನ್ ಆಂಟೊನಿ” ಹಾಗೂ “ಟಕ್ಕರ್” ಚಿತ್ರಗಳನ್ನು ರಘು ಶಾಸ್ತ್ರಿ ನಿರ್ದೇಶಿಸಿದ್ದರು.

ತ್ರಿಗುಣ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಆರ್.ಜಿ.ವಿ ನಿರ್ದೇಶನದ “ಕೊಂಡ” ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ.

ಹಿರಿಯ ನಟಿ ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ ಹಾಗೂ “ತರ್ಲೆನನ್ಮಗ” ಖ್ಯಾತಿಯ ಅಂಜಲಿ‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಹಳ್ಳಿ ಕಡೆ ದಿನ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್ ನಿಂದಾಗುವ ತೊಂದರೆ ಸರಿಪಡಿಸುವ “ಲೈನ್ ಮ್ಯಾನ್” ಸುತ್ತ ಈ ಕಥೆ ನಡೆಯಲಿದೆ. ತ್ರಿಗುಣ್ “ಲೈನ್ ಮ್ಯಾನ್” ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಶಾಂತಿ ಸಾಗರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ
ಪ್ರಚುರ ಪಿ ಪಿ , ಜೋತಿ ರಘು ಶಾಸ್ತ್ರೀ ಹಾಗೂ
ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!