ಕೃಷ್ಣಮೂರ್ತಿ ನಾಡಿಗ್ ನಿಧನ

ಕಿರುತೆರೆ ಮತ್ತು ಸಿನಿಮಾ ನಟ, ಬರಹಗಾರ ಕೃಷ್ಣಮೂರ್ತಿ ನಾಡಿಗ್ (67 ವರ್ಷ) ನಿನ್ನೆ ರಾತ್ರಿ 8 ಗಂಟೆಗೆ ಹೃದಯಾಘಾತದಿಂದ ಅಗಲಿದ್ದಾರೆ. ಕಡೂರು ಸಮೀಪ ಯಗಟಿ ಮೂಲದವರು ನಾಡಿಗ್.

ಕಳೆದ ನಾಲ್ಕು ದಶಕಗಳಿಂದ ಸಿನಿಮಾರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಬರಹಗಾರ, ಪ್ರೊಡಕ್ಷನ್ ಮ್ಯಾನೇಜರ್, ಸಹಾಯಕ ನಿರ್ದೇಶಕ, ನಟನಾಗಿ ಸಿನಿಮಾ ಮತ್ತು ಕಿರುತೆರೆ ಮಾಧ್ಯಮದಲ್ಲಿ ಅವರದು ದಟ್ಟ ಅನುಭವ.

ಕಳೆದೊಂದು ದಶಕದಿಂದ ಅವರು ನಟನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದರು. ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದ ‘ಗಂಗೋಧಕ’ ಸಿನಿಮಾ ಕಳೆದ ವರ್ಷ ಕೊಲ್ಕೊತ್ತಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಪಿ.ಶೇಷಾದ್ರಿ ನಿರ್ದೇಶನದ ‘ಸುಪ್ರಭಾತ’ ಕಿರುತೆರೆ ಸರಣಿ ಬರಹಗಾರರಾಗಿದ್ದ ಅವರು ನಟನಾಗಿ ಗಂಭೀರವಾಗಿ ತೊಡಗಿಸಿಕೊಂಡಿದ್ದು ಕೂಡ ಅಲ್ಲಿಯೇ.

ನಾಡಿಗ್ ಕುರಿತು ನಿರ್ದೇಶಕ ಪಿ.ಶೇಷಾದ್ರಿ ಅವರು ಹೇಳುವುದು ಹೀಗೆ – “ಸಿನಿಮಾರಂಗದ ಬಗ್ಗೆ ಅವರಿಗೆ ವಿಪರೀತ ಪ್ಯಾಷನ್ ಇತ್ತು. ಕತೆಯನ್ನು ತುಂಬಾ ಚೆನ್ನಾಗಿ ನರೇಟ್ ಮಾಡುತ್ತಿದ್ದ ಅವರು ಗ್ರಾಮೀಣ ಸೊಗಡಿನ ಚಿತ್ರಣವನ್ನು ತುಂಬಾ ಚೆನ್ನಾಗಿ ಅಕ್ಷರಗಳಲ್ಲಿ ಕಟ್ಟಿಕೊಡುತ್ತಿದ್ದರು. ಸಂಗೀತದ ಬಗೆಗಿನ ಕತೆಯೊಂದರ ಕುರಿತು ಅವರು ಹೇಳಿದ್ದ ಸಾಲುಗಳು ನನಗೆ ಇಷ್ಟವಾಗಿದ್ದವು. ಅದನ್ನು ಕತೆ ಮಾಡಿಕೊಡಿ ಎಂದು ಹೇಳಿದ್ದೆ. ನಟನೆಯಲ್ಲಿ ಬ್ಯುಝಿಯಾದ ಅವರಿಗೆ ಕತೆ ಹೆಣೆಯಲು ಸಾಧ್ಯವಾಗಲಿಲ್ಲ ಎನಿಸುತ್ತದೆ. ಈ ಪ್ರಾಜೆಕ್ಟ್ ಆಗಬೇಕಿತ್ತು…”

Be the first to comment

Leave a Reply

Your email address will not be published. Required fields are marked *

Translate »
error: Content is protected !!