ಕೊರಗಜ್ಜ

ಆರು ಭಾಷೆಗಳಲ್ಲಿ ತೆರೆಗೆ ಬರಲಿದೆ ‘ಕೊರಗಜ್ಜ’ ಸಿನಿಮಾ

ಸುಧೀರ್ ಅತ್ತಾವರ್ ನಿರ್ದೇಶನದ ಹಾಗೂ ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹು ನಿರೀಕ್ಷಿತ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ಅಡಿಯ “ಕೊರಗಜ್ಜ” ಚಿತ್ರದ ಫಸ್ಟ್ ಲುಕ್ ಟೀಸರ್ ಹಾಗೂ ತ್ರಿಡಿ ಮೋಷನ್ ಪೋಸ್ಟರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು.

ದಕ್ಷಿಣ ಕನ್ನಡದ ವಾದ್ಯ ಹಿಮ್ಮೇಳ ಹಾಗೂ ಉಡುಪಿಯ ಮಹಿಳಾ ತಂಡದವರ ಹುಲಿ ನೃತ್ಯದ ಮೆರವಣಿಗೆಯಲ್ಲಿ ಸಾಗಿಬಂದ “ಕೊರಗಜ್ಜ” ನ ಎರಡು ಕಟೌಟ್ ಗಳು ಡೊಳ್ಳು,ಕೊಂಬು-ಕಹಳೆ, ಕೊಳಲು, ತಾಸೆ,ತಾಳಗಳ ವಾದ್ಯಮೇಳದ ಹಿನ್ನೆಯಲ್ಲಿ ಹುಲಿವೇಶದ ಅಬ್ಬರದ ನ್ರತ್ಯದ ನಡುವೆ ಫಸ್ಟ್ ಲುಕ್ ಅನಾವರಣ ಗೊಂಡಿರುವುದು ಅತ್ಯಂತ ವಿಶೇಷವಾಗಿತ್ತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವೆ ಮೋಟಮ್ಮ, ನಿರ್ಮಾಪಕಿ – ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ನಿರ್ದೇಶಕ, ನಿರ್ಮಾಪಕ, ಸಿನಿಮಾದ ನಟ ನಟಿಯರೆಲ್ಲ ಕಟೌಟ್ ಗೆ ಪುಷ್ಪಾರ್ಚನೆ ಗೊಳಿಸಿರುವುದು ಕಾರ್ಯಕ್ರಮಕ್ಕೆ ವಿಶೇಷವಾದ ಮೆರುಗನ್ನು ನೀಡಿತು.

ಕೊರಗಜ್ಜ

ಮೂರು ವರ್ಷಗಳ ಹಿಂದೆ ಆರಂಭವಾದ ಸಿನಿಮಾ ಈಗ ಅನೇಕ ಅಡೆತಡೆಗಳನ್ನು ದಾಟಿ ಬಿಡುಗಡೆಯ ಹಂತ ತಲುಪಿದೆ. ಇದರ ಪೂರ್ವಭಾವಿಯಾಗಿ ಇಂದು ಫಸ್ಟ್ ಲುಕ್ ಟೀಸರ್ ಹಾಗೂ ತ್ರಿಡಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ನನಗೆ ತಿಳಿದ ಹಾಗೆ ದಕ್ಷಿಣ ಭಾರತದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ತ್ರಿಡಿ ಪೋಸ್ಟರ್ ಮಾಡಿರುವುದು. ಕೊರಗಜ್ಜನ ಆಶೀರ್ವಾದದಿಂದ ಸಿನಿಮಾ ಅಂದುಕೊಂಡ ಹಾಗೆ ಬಂದಿದೆ. ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮತ್ತು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ತಮ್ಮ ಕಾರ್ಯ ನಿರ್ವಹಿಸಿರುತ್ತಾರೆ. ಚಿತ್ರತಂಡದ ಸಹಕಾರ ಅಪಾರ. ಒಟ್ಟು ಆರು ಭಾಷೆಗಳಲ್ಲಿ ಮೂಡಿಬಂದಿರುವ ನಮ್ಮ ಚಿತ್ರದಲ್ಲಿ ಒಟ್ಟು 31 ಹಾಡುಗಳಿದೆ(ಆರು ಭಾಷೆಗಳಿಂದ). ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ದ ಗಾಯಕ – ಗಾಯಕಿಯರು ಈ ಹಾಡನ್ನು ಹಾಡಿದ್ದಾರೆ. ಸುಮಾರು ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದರು.

ಇದು ನಾನು ಜೈ ಜಗದೀಶ್ ಆರಂಭಿಸಿದ ಸಿನಿಮಾ.ಸುಮಾರು 25 ಸಿನಿಮಾ ನಿರ್ಮಾಣ ಮಾಡಿರುವ ನಮಗೆ ಈ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗದೆ,ಈ ಪ್ರೋಜೆಕ್ಟ್ ನಿಂದ ಹಿಂದೆ ಸರಿದೆವು. ಆದರೆ ಈಗ ಅದು ಸುಧೀರ್ ಅತ್ತಾವರ್ ಗೆ ಇದು ಒಲಿದಿದೆ. ವಿಭಿನ್ನವಾಗಿ- ಅದ್ದೂರಿ ಫಸ್ಟ್ ಲುಕ್ ರಿಲೀಸ್ ನೋಡಿ ಈ ಸಿನಿಮಾ ಯಾವ ಮಟ್ಟದಲ್ಲಿ ಮೂಡಿಬಂದಿರಬಹುದೆನ್ಬುವುದನ್ನು ಊಹಿಸಬಹುದು ಎಂದು ವಿಜಯಲಕ್ಷ್ಮಿ‌ ತಿಳಿಸಿದರು.

ಕೊರಗಜ್ಜ

ನಿರ್ದೇಶಕರು ನನಗೆ ಬಹಳ ವರ್ಷಗಳ ಸ್ನೇಹಿತರು. ಅವರು ಹೇಳಿದ ಕಥೆ ಕೇಳಿದ ತಕ್ಷಣ ನಿರ್ಮಾಣಕ್ಕೆ ಮುಂದಾದೆ. ನಾವು ಸಹ ಕೊರಗಜ್ಜನನ್ನು ಆರಾಧಿಸುವ ಕುಟುಂಬದವರು. ಅನುಭವಿ ಕಲಾವಿದರು ಹಾಗೂ ನುರಿತ ತಂತ್ರಜ್ಞರು ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ‌. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನವೆಂಬರ್ ಕೊನೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದೇವೆ ಎಂದರು ನಿರ್ಮಾಪಕ ತ್ರಿವಿಕ್ರಮ ಸಪಲ್ಯ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಸತತ 3 ವರ್ಷಗಳಿಂದ ಸಿನಿಮಾದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸದ ಬಗೆಗಿನ ಸಾವಿಸ್ತಾರ ವಿಚಾರ ಹಂಚಿಕೊಂಡರು.

ನಿರ್ದೇಶಕರ ಹಾಗೂ ಸಹ ಕಲಾವಿದರ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡ ಹಿರಿಯ ನಟಿ ಭವ್ಯ ಅವರು, ರಾಣಿ “ಪಂಜಂದಾಯಿ” ಪಾತ್ರದಲ್ಲಿ ಖ್ಯಾತ ನಟ ಕಬೀರ್ ಬೇಡಿಯೊಂದಿಗೆ ನಟಿಸಿಸ ಅನುಭವ ಹೇಳಿದರು. ಹಾಡಿನ ಬಿ ಟಿ ಎಸ್ ಮತ್ತು ಮೇಕಿಂಗ್ ವೀಡಿಯೋ ನೆರೆದವರನ್ನು ಮಂತ್ರಮುಗ್ಧ ಗೊಳಿಸಿತು.

ನನ್ನ ವೃತ್ತಿಜೀವನದಲ್ಲೇ ಇದು ವಿಭಿನ್ನವಾದ ಸಿನಿಮಾ ಎಂದು ಮಾತನಾಡಿದ ನಟಿ ಶೃತಿ, ನಾನು ಈ ಚಿತ್ರದಲ್ಲಿ ಕೊರಗಜ್ಜನ ಸಾಕು ತಾಯಿಯ ಪಾತ್ರ ನಿರ್ವಹಿಸಿದ್ದೇನೆ. ಈ ಚಿತ್ರಕ್ಕಾಗಿ ಸತತ ಇಪ್ಪತ್ತೆಂಟು ಗಂಟೆಗಳ ಚಿತ್ರೀಕರಣ ಮಾಡಿದ್ದೇನೆ. ಇದು ಮರೆಯಲಾರದ ಅನುಭವ. ಅಷ್ಟು ಹೊತ್ತು ಕೆಲಸ ಮಾಡಿದರೂ ನಿರ್ದೇಶಕರಲ್ಲಿದ್ದ ಉತ್ಸಾಹ ಒಂದು ಚೂರು ಕಡಿಮೆ ಆಗಿರಲಿಲ್ಲ. ಕೊರಗಜ್ಜನ ಆಶೀರ್ವಾದದಿಂದ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!