ಕೌಂತೇಯ

ಮರ್ಡರ್ ಮಿಸ್ಟ್ರಿ ‘ಕೌಂತೇಯ’ ಚಿತ್ರಕ್ಕೆ ಶಶಿಕುಮಾರ್ ಚಾಲನೆ

ಮಹಾಭಾರತದ ಕುಂತೀಪುತ್ರ ಕರ್ಣನ ಇನ್ನೊಂದಯ ಹೆಸರೇ ಕೌಂತೇಯ. ಇದೀಗ ಇದೇ ಹೆಸರಿನ ಚಿತ್ರವೊಂದು ಸೆಟ್ಟೇರಿದೆ. ಹಾಗಂತ ಇದೇನು ಪೌರಾಣಿಕ ಕಥೆಯಲ್ಲ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕ್ರೈಂ, ಥ್ರಿಲ್ಲರ್ ಕಾನ್ಸೆಪ್ಟ್ ಇದಾಗಿದ್ದು, ಕಥೆಗೆ ಇದೇ ಟೈಟಲ್ ಸೂಕ್ತ ಎಂದು ಇಟ್ಟಿದ್ದಾರೆ ನಿರ್ದೇಶಕ ಬಿಕೆ. ಚಂದ್ರಹಾಸ. ಹಿರಿಯನಟ ಅಚ್ಯುತ್ ಕುಮಾರ್ ಹಾಗೂ ಶರಣ್ಯ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

ಚಿತ್ರದ ಪ್ರಥಮ ದೃಶ್ಯಕ್ಕೆ ಹಿರಿಯ ನಟ ಶಶಿಕುಮಾರ್ ಅವರು ಕ್ಲಾಪ್ ಮಾಡಿ ಶುಭ ಹಾರೈಸಿದರು, ಸಾಹಿತಿ ವಿ.ನಾಗೇಂದ್ರಪ್ರಸಾದ್ ಅವರು ಆಕ್ಷನ್ ಕಟ್ ಹೇಳಿದರು. ಹಾಗೂ ಮತ್ತೊಬ್ಬ ಸಾಹಿತಿ ವಿ.ಮನೋಹರ್ ಅವರು ಕ್ಯಾಮೆರಾ ಚಾಲನೆ ಮಾಡಿದರು. ನಿರ್ಮಾಪಕ ಬಿಕೆ.ಶ್ರೀನಿವಾಸ್,‌ಮಹೇಶ್ ಬಾಬು, ರವಿತೇಜ, ಸತ್ಯ ಹೆಗಡೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕೌಂತೇಯ

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಬಿ.ಕೆ.ಚಂದ್ರಹಾಸ ಮಾತನಾಡುತ್ತ ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕ್ರೈಮ್ ಸ್ಟೋರಿಯಿದು. ಚಿತ್ರದಲ್ಲಿ ಶರಣ್ಯ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್ ತಂದೆ ಮಗಳಾಗಿ ಅಭಿನಯಿಸುತ್ತಿದ್ದಾರೆ. ಜೂನ್ ೯ರಿಂದ ಮೊದಲ ಹಂತದ ಶೂಟಿಂಗ್ ಮಾಡುತ್ತಿದ್ದೇವೆ. ಬೆಂಗಳೂರು ಹಾಗೂ ಮೈಸೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಹಾಡುಗಳಿಲ್ಲ. ರೀರೆಕಾರ್ಡಿಂಗ್ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ನಾಯಕನಟ ಅಚ್ಯುತ್ ಕುಮಾರ್ ಮಾತನಾಡುತ್ತ ರಂಗನಾಥ ಎಂಬ ನಿವೃತ್ತಿಯ ಅಂಚಿನಲ್ಲಿರುವ ಸಬ್ ಇನ್ಸ್ ಪೆಕ್ಟರ್ ಪಾತ್ರ ನನ್ನದು. ಕರ್ತವ್ಯದ ಕೊನೇ ದಿನಗಳಲ್ಲಿ ಆತ ಎದುರಿಸುವ ರೋಚಕ ಕೇಸ್ ಒಂದರ ಕಥೆಯಿದು. ಕಡೆಯ ದಿನಗಳಲ್ಲಿ ಆತ ಈ ಕೊಲೆ ಕೇಸಿನ ಜತೆಗೆ ಏನೇನು ಸವಾಲುಗಳನ್ನು ಎದುರಿಸುತ್ತಾನೆ.ಎಂಬುದನ್ನು ನಿರ್ದೇಶಕ ಚಂದ್ರಹಾಸ ಅವರು ಥ್ರಿಲ್ಲಿಂಗ್ ಆಗಿ ಹೇಳಹೊರಟಿದ್ದಾರೆ ಎಂದರು.

ನಾಯಕಿ ಶರಣ್ಯ ಶೆಟ್ಟಿ ಮಾತನಾಡಿ ಅಚ್ಯುತ್ ಕುಮಾರ್ ಅವರ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿ ನಾನೊಬ್ಬ ಕ್ರೈಮ್ ರಿಪೋರ್ಟರ್ ಅಗಿ ನಟಿಸುತ್ತಿದ್ದು, ತುಂಬಾ ಪವರ್ಫುಲ್ ಅಂಡ್ ಬೋಲ್ಡ್ ಪಾತ್ರವದು. ಜತೆಗೆ ತಂದೆ ಮಗಳ ನಡುವಿನ ಎಮೋಷನಲ್ ಜರ್ನಿ ಕೂಡ ಚಿತ್ರದಲ್ಲಿದೆ ಎಂದರು.

ಕೌಂತೇಯ

ನಿರ್ಮಾಪಕ ಸುರೇಶ್ ಕುಮಾರ್ ಮಾತನಾಡುತ್ತ ಚಂದ್ರಹಾಸ ನನಗೆ ಮೊದಲಿಂದಲೂ ಪರಿಚಯ. ಅವರು ಈ ಕಥೆ ಹೇಳಿದಾಗ ಇಷ್ಟವಾಯಿತು. ನನಗೂ ಮೊದಲಿಂದ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಹಾಗಾಗಿ ಈ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡೆ. ಈ ಮುಂಚೆ ನಾನು ಎಂ.ಎನ್.ಸಿ. ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದೆ. ಮೊದಲಬಾರಿಗೆ ನಿರ್ಮಾಪಕನಾಗುತ್ತಿದ್ದೇನೆ ಎಂದು ತಮ್ಮನ್ನು ಪರಿಚಯಿಸಿಕೊಂಡರು. ಬಿಗ್ ಬಾಸ್ ನೀತು ಕೂಡ ಈ ಚಿತ್ರದಲ್ಲಿ ಒಬ್ಬ ಮಹಿಳಾ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಪಿ.ಎಲ್.ರವಿ ಅವರ ಛಾಯಾಗ್ರಹಣ, ಬಿಜೆ.ಭರತ್ ಅವರ ಹಿನ್ನೆಲೆ ಸಂಗೀತ, ಹರಿಮಹದೇವ್ ಅವರ ಸಂಭಾಷಣೆ, ಅನುರಂಜನ್ ಅವರ ಸಂಕಲನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!