ಪ್ರಜ್ವಲ್ ಮುಂದಿನ ಚಿತ್ರ ‘ಕರಾವಳಿ’ಯ ಮುಹೂರ್ತ

ಪ್ರಜ್ವಲ್‌ ದೇವರಾಜ್‌ ನಟನೆಯ 40ನೇ ಸಿನಿಮಾ ‘ಕರಾವಳಿ’ಯ ಮುಹೂರ್ತ ಬೆಂಗಳೂರಿನ ಬಸವನಗುಡಿ ದೇವಸ್ಥಾನದಲ್ಲಿ ನಡೆಯಿತು.

ಗುರುದತ್‌ ಗಾಣಿಗ ಆಕ್ಷನ್‌ ಕಟ್‌ ಹೇಳಿರುವ ‘ಕರಾವಳಿ’ ಸಿನಿಮಾದ ಚಿತ್ರೀಕರಣ ಮೂಡಬಿದಿರೆ, ಉಡುಪಿ ಸುತ್ತಮುತ್ತ ಫೆ.22ರಿಂದ ಆರಂಭವಾಗಲಿದೆ.

”ಇದು ನಮ್ಮ ಮಣ್ಣಿನ ಸಿನಿಮಾ. ಕೋಣ  ನಮ್ಮ ಚಿತ್ರದ ಭಾಗ. ಕಂಬಳದ ಹಿಂದೆ ಇರುವ ಶ್ರಮ ಊಹೆಗೆ ನಿಲುಕದ್ದು. ಚಂದ್ರಶೇಖರ್‌ ಅವರು ಬರೆದಿರುವ ಕಥೆ ಇದಾಗಿದೆ.  ‘ಕಾಂತಾರ’ ಸಿನಿಮಾದ ಕಥೆಗೂ ನಮ್ಮ ಕಥೆಗೂ ಯಾವುದೇ ಸಂಬಂಧವಿಲ್ಲ. ಇಲ್ಲಿ ದೈವಾರಾಧನೆ ಅಂಶಗಳಿಲ್ಲ. ಜಾತ್ರೆ, ಕಂಬಳದ ಘಮಲಿದೆ. ಕಂಬಳದ ಕೋಣಗಳನ್ನು ಮನೆಯ ಸದಸ್ಯರೆಂಬಂತೆ ಸಾಕುತ್ತಾರೆ. ನಮ್ಮ ಕಥೆಯೂ ಅಂತದೇ ಸೂಕ್ಷ್ಮವನ್ನು ಹೇಳುತ್ತದೆ. ಕೃಷಿ ಚಟುವಟಿಕೆಯ ಜೊತೆಗೆ ಕಂಬಳದಲ್ಲಿ ಭಾಗವಹಿಸುವ ತಂಡಗಳಿವೆ. ಇನ್ನೊಂದು ಕಂಬಳಕ್ಕಾಗಿಯೇ ಕೋಣಗಳನ್ನು ಬೆಳೆಸುತ್ತಾರೆ. ಕಂಬಳದ ಮೇಲಿನ ಆಸೆ, ಪ್ರೀತಿಗೋಸ್ಕರ ಭಾಗವಹಿಸುವಾತ, ವಾಣಿಜ್ಯ ಉದ್ದೇಶದಿಂದಲೇ ಭಾಗವಹಿಸುವವರ ವಿರುದ್ಧ ಗೆದ್ದಾಗ ಆಗುವ ಪರಿಣಾಮವೇನು ಎನ್ನುವ ಸೂಕ್ಷ್ಮ ವಿಚಾರವನ್ನು ಕಥೆ ಹೇಳುತ್ತದೆ.  ಸಿನಿಮಾ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ’ ಎಂದು ಗುರುದತ್‌ ಹೇಳಿದ್ದಾರೆ.

”ಚೀತಾ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಕಾಲಿಗೆ ಸಣ್ಣ ಗಾಯವಾಗಿತ್ತು. ಇದರಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಸದ್ಯ ‘ಕರಾವಳಿ’ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದು, ನಡುವೆ ಚೀತಾ ಪೂರ್ಣಗೊಳಿಸಲಿದ್ದೇನೆ. ‘ಕರಾವಳಿ’ಗಾಗಿ ಆ ಭಾಗದ ಕನ್ನಡ ಭಾಷೆಯನ್ನು ಕಲಿಯುತ್ತಿದ್ದೇನೆ. ‘ಧನಂಜಯ’ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದು, ಕಂಬಳದ ಕೋಣಗಳ ಜೊತೆ ತರಬೇತಿ ಪಡೆಯಬೇಕಾಗಿದೆ” ಎಂದು ಪ್ರಜ್ವಲ್‌ ದೇವರಾಜ್‌ ಹೇಳಿದ್ದಾರೆ.

”ಕಂಬಳದ ಕೋಣಗಳ ಜೊತೆ ‘ಧನಂಜಯ’ ಬೆಳೆಯುತ್ತಾನೆ. 80 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ವರ್ಷ ‘ಮಾಫಿಯಾ’, ‘ಗಣ’ ಮತ್ತು ‘ರಾಕ್ಷಸ’ ಬಿಡುಗಡೆಯಾಗಲಿದೆ’ ಎಂದಿದ್ದಾರೆ.

ಸಿನಿಮಾದ ನಾಯಕಿಯಾಗಿ ಸಂಪದಾ ಆಯ್ಕೆ ಆಗಿದ್ದಾರೆ.  ಬೆಂಕಿ ಹಾಗೂ ರೈಡರ್ ಸಿನಿಮಾಗಳಲ್ಲಿ ಕಾಣಿಸೊಂಡಿದ್ದ ಸಂಪದಾ ಪಶುವೈದ್ಯೆಯಾಗಿ ಸಿನಿಮಾದಲ್ಲಿ ನಟಿಸಲಿದ್ದಾರೆ.

‘ಕರಾವಳಿ’ ಗೆ ಅಭಿಮನ್ಯು ಸದಾನಂದ್ ಛಾಯಾಗ್ರಹಣ ಮಾಡಲಿದ್ದಾರೆ. ಸಚಿನ್ ಬಸ್ರೂರು ಸಂಗೀತ, ನಟ ಮಿತ್ರ  ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!