‘ಕರೋನಾ – ಕರಾಳ ರೋಗ ನಾಶʼ ಕಿರುಚಿತ್ರ ಬಿಡುಗಡೆ

ಕರಾಳ ರೋಗ ನಾಶ :  ಕೋವಿಡ್‌ ಬಂದಿದ್ದು ಹೇಗೆ? ಕಳಿಸೋದು ಹೇಗೆ?

ಕನ್ನಡ ಸಿನಿಮಾರಂಗದ ಖ್ಯಾತ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್ ಅವರ ಮಗ ಪವನ್‌ ವೆಂಕಟೇಶ್ ಕಿರುಚಿತ್ರವೊಂದರ ಮೂಲಕ ಕನ್ನಡದ ಮನರಂಜನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾನೆ. ‘ಕರೋನಾ – ಕರಾಳ ರೋಗ ನಾಶʼ ಎಂಬ ಕಿರುಚಿತ್ರವೊಂದರ ಮೂಲಕ ಕೋವಿಡ್-19ನ ವಿವಿಧ ಮಜಲುಗಳನ್ನು ಒಂದೊಳ್ಳೆ ಸಂದೇಶದ ಜೊತೆ ಅನಾವರಣಗೊಳಿಸಲಾಗಿದೆ. ಪವನ್ ಕಾಲೇಜು ವಿದ್ಯಾರ್ಥಿ. ಆತ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಬಾಲ್ಯದಿಂದಲೂ ಸಿನಿಮಾ ವಾತಾವರಣದಲ್ಲಿಯೇ ಬೆಳೆದು, ನಿರ್ದೇಶಕನಾಗಬೇಕೆಂಬ ಆಸಕ್ತಿ ಹೊಂದಿದ್ದ ಪವನ್ ʻಕರಾಳ ರೋಗ ನಾಶʼ ಕಿರುಚಿತ್ರದ ಮೂಲಕ ತನ್ನ ಕನಸಿನ ಹಾದಿಯಲ್ಲೊಂದು ಹೆಜ್ಜೆ ಇಟ್ಟಿದ್ದಾನೆ.

ಈ ಹಿಂದೆ ಸಿನಿಮಾ ಪ್ರಚಾರಕರ್ತ ಡಿವಿ. ಸುಧೀಂದ್ರ ಅವರ ಬದುಕಿನ ಹಾದಿಯನ್ನು ತೆರೆದಿಡುವ ’ಸುಧೀಂದ್ರ ಸಿನಿ ಪಯಣ’ ಎನ್ನುವ ಸಾಕ್ಷ್ಯ ಚಿತ್ರವನ್ನು ಪವನ್ ವೆಂಕಟೇಶ್ ನಿರ್ದೇಶಿಸಿದ್ದರು.
ಸುಧೀಂದ್ರ ಅವರ ಕಾಲಾನಂತರ ಅವರ ಅಣ್ಣನ ಮಗ ವೆಂಕಟೇಶ್ ಶ್ರೀ ರಾಘವೇಂದ್ರ ಚಿತ್ರವಾಣಿಯ ಮುಖ್ಯಸ್ಥಿಕೆ ವಹಿಸಿದ್ದಾರೆ. ಜೊತೆಗೆ ಸುಧೀಂದ್ರ ಅವರ ಮಗ ಸುನಿಲ್ ಮತ್ತು ವೆಂಕಟೇಶ್ ಅವರ ಸಹೋದ ಡಿ.ಜಿ. ವಾಸುದೇವ್ ಸಹಾ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಇವೆಲ್ಲದರ ಪ್ರತಿಫಲವಾಗಿ ಇಂದು ಶ್ರೀರಾಘವೇಂದ್ರ ಚಿತ್ರವಾಣಿ ಮತ್ತು ಸುಧೀಂದ್ರ ವೆಂಕಟೇಶ್ ಸಹೋದರರು ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ.

ಈಗ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂರನೇ ತಲೆಮಾರಿನ ಹುಡುಗರೆಲ್ಲ ಸೇರಿ ಈ ಕಿರುಚಿತ್ರವನ್ನು ರೂಪಿಸಿದ್ದಾರೆ. 4 ನಿಮಿಷ 15 ಸೆಕೆಂಡ್ ಸಮಯದ ಈ ಶಾರ್ಟ್‌ ಫಿಲ್ಮ್‌ ಒಂದೇ ಕೋಣೆಯಲ್ಲಿ ಚಿತ್ರಿತವಾಗಿದೆ. ಕೊರೋನಾ ತಡೆಯುವುದು ಹೇಗೆ ಅನ್ನೋದರ ವಿವರ ಇದರಲ್ಲಿದ್ದು, ತಾತ ಮತ್ತು ಮೊಮ್ಮೊಗನ ಪಾತ್ರಗಳ ಮೂಲಕ ಅದು ಅನಾವರಣಗೊಂಡಿದೆ. ಈ ಕಿರುಚಿತ್ರವನ್ನು ನೋಡಿದರೆ ಕೊರೋನಾ ಹರಡಲು ಕಾರಣ ಮತ್ತು ಅದನ್ನು ನಿಯಂತ್ರಿಸುವ ವಿಧಾನ ಎರಡೂ ಸ್ಪಷ್ಟವಾಗಿ ಅರ್ಥವಾಗುತ್ತದೆ.

ತರುಣ ಜಯಸಿಂಹ ತಾತನ ಪಾತ್ರಲ್ಲಿ ಕಾಣಿಸಿಕೊಂಡರೆ ಸುನಿಲ್‌ ಪುತ್ರ ಮಾ. ಡಿ.ಎಸ್.‌ ಸುಧೀಂದ್ರ ಮೊಮ್ಮಗನಾಗಿ ಪಾತ್ರ ನಿರ್ವಹಿಸಿದ್ದಾನೆ. ಸುಧೀಂದ್ರ ವೆಂಕಟೇಶ್‌ ಅವರ ಪುತ್ರಿ ಚಂದನ ಅಂದವಾದ ಪ್ರಸಾದನ ಮಾಡಿದ್ದಾರೆ. ವೆಂಕಟೇಶ್‌ ಪುತ್ರ ಪವನ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಛಾಯಾಗ್ರಾಹಕ ಅರುಣ್ ಡಿ ಎಂ ದೃಶ್ಯಗಳನ್ನು ಸುಂದರವಾಗಿ ಸೆರೆ ಹಿಡಿದ್ದಾರೆ. ಮನೋಹರ್ ಎಚ್ ಎನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನಿಮಾವೊಂದನ್ನು ಕಟ್ಟಿನಿಲ್ಲಿಸಲು ಬೇಕಾದ ಶ್ರದ್ಧೆ, ಪೂರ್ವತಯ್ಯಾರಿಗಳೆಲ್ಲಾ ಈ ಕಿರುಚಿತ್ರದಲ್ಲೇ ಎದ್ದುಕಂಡಿದೆ. ಸಣ್ಣ ವಯಸ್ಸಿನ ಯುವಕರೆಲ್ಲಾ ಸೇರಿ ರೂಪಿಸಿರುವ ಪುಟಾಣಿ ಪ್ರಯತ್ನವಾದರೂ, ಮುಂದೊಂದು ದಿನ ಈ ಪ್ರತಿಭಾವಂತರು ದೊಡ್ಡ ಸಾಹಸ ಮಾಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!