‘ಕಂಬ್ಳಿ ಹುಳ’ ಚಿತ್ರವನ್ನು ಗೀತ ರಚನೆಕಾರ ಕವಿರಾಜ್ ಅವರು ಪ್ರಶಂಸೆ ಮಾಡಿದ್ದಾರೆ.
ಈ ಬಗ್ಗೆ ಅವರು ಫೇಸ್ ಬುಕ್ ನಲ್ಲಿ ಮೆಚ್ಚುಗೆಯ ಮಾತು ಹೇಳಿದ್ದಾರೆ.
“ಸಿನಿಮಾವೆಂದರೆ ನಾಯಕ ನಾಯಕಿಯರ ಕಥೆಯಷ್ಟೇ ಎಂದುಕೊಂಡಿರುವ ಹೊತ್ತಿಗೆ ಅದರಾಚೆ ಅಕ್ಕಪಕ್ಕದ ಪಾತ್ರಗಳ ಎದೆಯೊಳಗು ಇಣುಕಿ ಅವರ ಭಾವನೆಗಳನ್ನು , ತೊಳಲಾಟಗಳನ್ನು ಹೆಕ್ಕಿ ತಂದು ಹೆಣೆದು ಕಥೆಯಾಗಿಸಿದ್ದಾರೆ ನಿರ್ದೇಶಕ ನವನ್ ಶ್ರೀನಿವಾಸ್.
ನಟರಾಜ – ಪುಟ್ಟಿಯ ಪ್ರೇಮಕಥೆಯಷ್ಟೇ ಗಾಢವಾಗಿ ವಾಸಣ್ಣನ ನಿಟ್ಟುಸಿರು , ಚೋಂಗಿಯ ಸ್ನೇಹ , ರಾಮಕ್ಕನ ನೋಟ , ನಾಗೇಶ ಮತ್ತು ಅವನ ತಾಯಿಯ ತೊಳಲಾಟ ಕಾಡುತ್ತದೆ. ಇದೊಂದು ರೀತಿ ಒಂದೇ ಕಥೆಯೊಳಗೆ ಬಿಡಿ ಬಿಡಿಯಾಗದೆ ಬೆಸೆದುಕೊಂಡಿರುವ ನಾಲ್ಕೈದಾರು ಕಥೆಗಳ ವಿರಳ ಫಾರ್ಮ್ಯಾಟ್ ಸಿನಿಮಾ” ಎಂದಿದ್ದಾರೆ.
ಮಲೆನಾಡಿನ ಹುಡುಗರ ಗ್ಯಾಂಗು ಮೊದಲ ಅವಕಾಶದಲ್ಲೇ ಗೆದ್ದೇ ಗೆಲ್ಲಬೇಕು ಎಂಬ ಛಲದಲ್ಲಿ ತಮ್ಮ ಪ್ರತಿಭೆಯನ್ನೆಲ್ಲ ಒತ್ತಿ ಒತ್ತಿ ತುಂಬಿಕೊಟ್ಟಿರುವ ಪ್ಯಾಕೇಜ್ ಈ ‘ಕಂಬ್ಳಿ ಹುಳ’. ಒಳ್ಳೇ ಸಿನಿಮಾ ಬಂದಾಗ ,
ಮಣ್ಣಿನ ಸೊಗಡಿನ ನವ(ನ್) ಪ್ರತಿಭೆಗಳು ಬಂದಾಗ ಪ್ರೇಕ್ಷಕರಾಗಿ , ಚಿತ್ರಪ್ರೇಮಿಗಳಾಗಿ ಅವರನ್ನು ಗೆಲ್ಲಿಸದಿದ್ದರೆ ಮುಂದೆ ಹೊಸತನವನ್ನು ಬಯಸುವ ಹಕ್ಕನ್ನೇ ಕಳೆದುಕೊಳ್ಳುತ್ತೇವೆ ಎಂದಿದ್ದಾರೆ.
ಓಟಿಟಿಗೆ ಬರಲೆಂದು ಕಾಯದೇ ಚಿತ್ರಮಂದಿರಕ್ಕೆ ಬೇಗನೆ ಹೋಗಿ ಅಪ್ಪಟ ಪ್ರತಿಭಾವಂತ ಹುಡುಗರ ಪಡೆಯ ಬೆನ್ನ್ ತಟ್ಟಿ , ಕೈ ಹಿಡಿದು ಮುನ್ನಡೆಸಿ ಎಂದು ಅವರು ಕೋರಿದ್ದಾರೆ.
___





Be the first to comment