ಕರೋನಾ ಹಾವಳಿಯಿಂದ ಇಡೀ ಚಿತ್ರೋದ್ಯಮವೇ ಸ್ಥಗಿತಗೊಂಡಿದೆ. ಇತ್ತ ಯಾವ ಚಿತ್ರ ಚಟುವಟಿಕೆಗಳು ನಡೆಯುತ್ತಿಲ್ಲಾ. ಸಿನಿಮಾ ತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಕೊಂಡಿಯಾಗಿದ್ದವರು ಮಾಧ್ಯಮದವರು , ಪ್ರತಿಯೊಂದು ಸಿನಿಮಾ ವಿಚಾರವನ್ನು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಜನರಿಗೆ ತೋರಿಸುತ್ತಿದ್ದರು. ಈಗ ಅದು ಕೂಡ ವಿರಳವಾಗಿದೆ.

ಇಂತಹ ಸಂದರ್ಭದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು ತಮ್ಮ ತೋಟದಲ್ಲಿ ತಾವೇ ಸ್ವತಹ ಬೆಳೆದಂಥ ತರಕಾರಿಯನ್ನ ಮಾಧ್ಯಮದವರಿಗೆ ನೀಡುವುದರ ಜೊತೆಗೆ ಒಂದಿಷ್ಟು ಸಹಾಯ ಹಸ್ತವನ್ನು ಮಾಡಿದರೆ.

ಆರಂಭದಿಂದಲೂ ನಿರ್ದೇಶಕ ಆರ್. ಚಂದ್ರು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ದವರೊಂದಿಗೆ ಒಳ್ಳೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ರೈತ ಕುಟುಂಬದಿಂದ ಬಂದಂಥ ನಿರ್ದೇಶಕ ಆರ್ .ಚಂದ್ರು ಚಿತ್ರರಂಗದ ಕಡೆ ತಮ್ಮ ಆಸಕ್ತಿಯನ್ನು ಹೆಚ್ಚು ಬಳಸಿಕೊಂಡು ಸಾಲುಸಾಲಾಗಿ ಯಶಸ್ವಿ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಈಗ ಸದ್ಯ ಬಹು ನಿರೀಕ್ಷೆಯ “ಕಬ್ಜ” ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ ಹೊರ ಬರಲು ಚಿತ್ರೀಕರಣ ನಡೆಯುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಈ ಚಿತ್ರವು ಈಗಾಗಲೇ ಬಹಳಷ್ಟು ಸದ್ದು ಮಾಡಿದೆ. ಚಿತ್ರೋದ್ಯಮ ಒಂದು ಮನೆ ಇದ್ದಂತೆ.

ಆ ಮನೆಯಲ್ಲಿ ವಾಸ ಮಾಡುವ ನಾವೆಲ್ಲರೂ ಅಣ್ಣತಮ್ಮಂದಿರಿದ್ದಂತೆ , ಒಬ್ಬರಿಗೆ ಕಷ್ಟ ಬಂದಾಗ ಮತ್ತೊಬ್ಬರು ಸ್ಪಂದಿಸುವುದು ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದು. ಯಾಕೆಂದರೆ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಜಾತಿ , ಧರ್ಮದ ಅಗತ್ಯವಿಲ್ಲ. ಆ ನಿಟ್ಟಿನಲ್ಲಿ ನಿರ್ದೇಶಕ ಆರ್. ಚಂದ್ರು ರವರು ನಟ ಉಪೇಂದ್ರ ಅವರೊಂದಿಗೆ ಚರ್ಚಿಸಿ ಮಾಧ್ಯಮದವರಿಗೂ ತಮ್ಮ ಕೈಲಾದ ಸಹಾಯವನ್ನ ಮಾಡಬೇಕು ಎಂದು ಮುಂದಾಗಿ ತರಕಾರಿ, ಫುಡ್ ಕಿಟ್ ಜೊತೆಗೆ ಸಹಾಯ ಹಸ್ತವನ್ನು ನೀಡಿದ್ದಾರೆ.

ಈ ವಸ್ತುಗಳನ್ನು ತಲುಪಿಸುವ ಜವಾಬ್ದಾರಿಯನ್ನು ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ತಂಡದವರ ಸಹಕಾರವನ್ನು ಪಡೆದುಕೊಂಡು ವಿತರಣೆ ಮಾಡಿದ್ದಾರೆ. ಲಾಕ್ ಡೌನ್ ಸಮಯ ಇರುವುದರಿಂದ ಪತ್ರಕರ್ತರು ಹೊರಬರದ ಕಾರಣ ಅವರ ಇದ್ದ ಸ್ಥಳಗಳಿಗೆ ತಲುಪಿಸುವ ಈ ಕೆಲಸ ನಿಜವಾಗಿಯೂ ಮೆಚ್ಚುವಂಥದು.

ಉಪ್ಪಿ ಫೌಂಡೇಶನ್‍ಗೆ ಈಗಾಗಲೇ ಒಂದಷ್ಟು ಹಿರಿ ಕಲಾವಿದರು ಸಹ ದೇಣಿಗೆ ನೀಡಿದ್ದಾರೆ. ಸಾಧು ಕೋಕಿಲಾ, ಶೋಭರಾಜ್ ಹಿರಿಯನಟಿ ಬಿ.ಸರೋಜಾದೇವಿ, ಪವನ್ ಒಡೆಯರ್, ನಟಿ ಮಾನ್ಯ ಸೇರಿದಂತೆ ಸಾಕಷ್ಟು ಜನ ಉಪ್ಪಿ ಜೊತೆ ಕೈಜೋಡಿದ್ದಾರೆ. ಇದೀಗ ಕಬ್ಜ ಚಿತ್ರದ ನಿರ್ದೇಶಕ ಆರ್.ಚಂದ್ರು ಕೂಡ ಉಪ್ಪಿ ಜೊತೆ ಕೈಜೋಡಿಸಿದ್ದಾರೆ. ಆರ್.ಚಂದ್ರು ಮತ್ತು ಕಬ್ಜ ತಂಡ ಒಂದು ಲಕ್ಷ ರೂ. ದೇಣಿಗೆ ನೀಡುವ ಮೂಲಕ ಚಿತ್ರಕಾರ್ಮಿಕರ ನೆರವಿಗೆ ನಿಂತಿದ್ದಾರೆ.

ಅಲ್ಲದೆ ತಮ್ಮ ತೋಟದಲ್ಲಿ ಬೆಳೆದಿರುವ ತರಕಾರಿಗಳನ್ನು ಸಹ ಚಂದ್ರು ಅವರು ವಿತರಣೆಗಾಗಿ ನೀಡಿದ್ದಾರೆ.ಒಮ್ಮೆ ಉಪ್ಪಿ ಅವರೇ ನನಗೆ ಕಾಲ್‍ಮಾಡಿ ಕೊರೋನಾದಿಂದ ಜನ ಏನೆಲ್ಲ ಕಷ್ಟಕ್ಕೆ ಸಿಕ್ಕಿದ್ದಾರೆ ಎಂಬ ವಿಚಾರವನ್ನು ಹಂಚಿಕೊಂಡರು. ಆಗ ನನಗೂ ಏನಾದರೂ ಮಾಡಬೇಕು ಎನಿಸಿತು, ಹಾಗಾಗಿ ನಾನೂ ಅವರ ಜೊತೆ ಚಿಕ್ಕದಾಗಿ ಕೈಜೋಡಿಸಿದ್ದೇನೆ ಎಂದು ಹೇಳಿದರು.

ಒಟ್ಟಾರೆ ನಟ ಉಪೇಂದ್ರ ರವರು ಕೂಡ ತಮ್ಮ ಫೌಂಡೇಶನ್ ಮೂಲಕ ಚಿತ್ರೋದ್ಯಮದ ಕಲಾವಿದರು ತಂತ್ರಜ್ಞರಿಗೆ ಸಹಾಯ ಹಸ್ತವನ್ನು ಚಾಚಿದ್ದು , ಇದರೊಟ್ಟಿಗೆ ಹಲವರು ಕೈ ಜೋಡಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕರೋನಾ ಸಂಕಷ್ಟ ಸಮಯದಲ್ಲಿ ಸಹಾಯ ಮಾಡುತ್ತಿರುವ ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.