ಜೇಮ್ಸ್ ತೆಗೆದು ಹಾಕುವುದನ್ನು ಖಂಡಿಸಿ ಪ್ರತಿಭಟನೆ

ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ತೆಗೆದುಹಾಕುವ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಆರೋಪಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಡಾ.ಪುನೀತ್ ರಾಜಕುಮಾರ್ ಅವರನ್ನು ಆವಮಾನಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ಸರ್ಕಾರದ ವಿರುದ್ಧ ನಗರದ ರಾಮಸ್ವಾಮಿ ವೃತ್ತದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಈ ವೇಳೆ ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್, ರಾಜ್ ಕುಟುಂಬದ ಅಗ್ರಮಾನ್ಯ ನಟ ಪುನೀತ್ ರಾಜ್ ಕುಮಾರ್ ನಿಧನವಾಗಿ ತಿಂಗಳುಗಳೇ ಕಳೆದಿದ್ದರೂ ಅಭಿಮಾನಿಗಳ ನೋವು ಮಾಸಿಲ್ಲ. ಆಗಲೇ ಮತ್ತೆ ಅವಮಾನ ಮಾಡಲು ಹೊರಟಿರುವ ಬಿಜೆಪಿಯವರ ಮನಸ್ಥಿತಿಗೆ ಏನು ಹೇಳಬೇಕು ಎಂದು ಅರ್ಥ ಆಗುತ್ತಿಲ್ಲ. ಅವರ ಸಮಾಧಿಯ ಬಳಿ ಇವತ್ತಿಗೂ ಜನಸಾಗರ ಬರುತ್ತಲೇ ಇದೆ. ಕನ್ನಡಿಗರಷ್ಟೇ ಅಲ್ಲದೆ ನೆರೆಹೊರೆಯ ರಾಜ್ಯಗಳಲ್ಲೂ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅದನ್ನು ಮೀರಿ ತಮಿಳುನಾಡಿನ ಅಧಿವೇಶನವೊಂದರಲ್ಲಿ ಪುನೀತ್ ರ ಮಾನವೀಯ ಕಾರ್ಯಗಳನ್ನು ಕೊಂಡಾಡಿದ್ದಾರೆ. ಆದರೆ ಅವರ ಮಾನವೀಯತೆ, ಸಮಾಜ ಸೇವೆಗೆ ಯಾವ ಗೌರವ ಕೊಡಬೇಕು ಎಂಬ ಕನಿಷ್ಠ ಜ್ಞಾನ ಬಿಜೆಪಿ ಸರ್ಕಾರಕ್ಕಿಲ್ಲ. ಇಡೀ ದೇಶದೆಲ್ಲೆಡೆ ಅವರ ಕೊನೆಯ ಜೇಮ್ಸ್ ಚಿತ್ರವನ್ನು ಕುಟುಂಬ ಸಮೇತ ಭಾವನಾತ್ಮಕವಾಗಿ ತೆಗೆದುಕೊಂಡು ತುದಿಗಾಲಲ್ಲಿ ನಿಂತು ಕಾಯುತ್ತಿದ್ದು,ಯಶಸ್ವಿಯ ನಾಗಲೋಟದಲ್ಲಿ ಸಾಗುತ್ತಿದೆ. ಆದರೆ ಇದನ್ನು ಸಹಿಸದ ಬಿಜೆಪಿಯ ಹೀನ ಮನಸ್ಸಿನ ಕೆಲವರು ದುರುದ್ದೇಶದಿಂದ ಜೇಮ್ಸ್ ಚಿತ್ರವನ್ನು ತೆಗೆಯುವ ಹುನ್ನಾರ ಮಾಡುತ್ತಿರುವುದು ಪುನೀತ್ ರಾಜ್ ಕುಮಾರವರಿಗೆ ಮಾಡುತ್ತಿರುವ ಉದ್ದೇಶಿತ ಅವಮಾನವೆಂದೇ ಬಿಂಬಿಸಬಹುದಾಗಿದೆ ಎಂದರು.

ಇದನ್ನು ಖಂಡಿಸಿ ಆ ನಿಟ್ಟಿನಲ್ಲಿ ಈ ದಿನ ಪ್ರತಿಭಟಿಸಿದ್ದೇವೆ. ಬಿಜೆಪಿ ಸರ್ಕಾರವೇ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದಾರೆ. ಆ ಪ್ರಶಸ್ತಿ ನೀಡಿದ್ದಕ್ಕೆ ಹಾಗೂ ಮೈಸೂರು ವಿವಿ ನೀಡಿರುವ ಮರಣೋತ್ತರ ಗೌರವ ಡಾಕ್ಟರೇಟ್ ಗೆ ಗೌರವ ಸಿಗಬೇಕೆಂದರೆ ಪ್ರತಿಭಾವಂತ ನಟನನ್ನು ಅವಮಾನಿಸಬಾರದು. ಬದಲಾಗಿ ಅವರ ಚಿತ್ರಕ್ಕೂ ತೆರಿಗೆ ವಿನಾಯಿತಿಯನ್ನು ನೀಡಬೇಕೆಂದು ಆಗ್ರಹಿಸುತ್ತೇನೆ. ಇಂಥ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರತಿಭಟನೆ ಮುಂದಾಗುತ್ತೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್, ಶ್ರೀಧರ್,ಕೆಪಿಸಿಸಿ ಸದಸ್ಯರುಗಳಾದ ವೀಣಾ, ಶ್ರೀನಾಥ್ ಬಾಬು, ಬ್ಲಾಕ್ ಅಧ್ಯಕ್ಷೆ ವಿದ್ಯಾ, ಶಿವ ರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ರವಿಚಂದ್ರ, ಗಿರೀಶ್, ಮುಖಂಡರುಗಳಾದ ವಿಜಯ್ ಕುಮಾರ್, ಹರೀಶ್ ನಾಯ್ಡು, ವಿನಯ್ ಕುಮಾರ್ ಜೆ, ಡೈರಿ ವೆಂಕಟೇಶ್, ಗುಣಶೇಖರ್, ನವೀನ್ ಎಂ, ಕೆಂಪಿ, ಇರ್ಫಾನ್, ಫಾರುಖ್, ಶಾದಿಖ್ ಉಲ್ಲಾ, ರೆಹಮಾನ್, ನಾಸೀರ್, ಸುರೇಶ್, ಅಭಿಷೇಕ್, ಶಿವಣ್ಣ ಹಾಗೂ ನೂರಾರು ಜನ ಭಾಗಿ ಆಗಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!