‘ಹೆಬ್ಬುಲಿ’ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಅವರ ಕೇಶವಿನ್ಯಾಸ ತುಂಬಾ ಟ್ರೆಂಡ್ ಆಗಿತ್ತು. ಅದನ್ನು ‘ಹೆಬ್ಬುಲಿ ಕಟ್’ ಎಂದೇ ಕರೆಯಲಾಗುತ್ತಿತ್ತು. ಇದೇ ಹೆಸರು ಇದೀಗ ಸಿನಿಮಾ ಶೀರ್ಷಿಕೆಯಾಗಿ ಬಿಡುಗಡೆಯಾಗುತ್ತಿದೆ. ನಟ ಸತೀಶ್ ನೀನಾಸಂ ಅವರ ಸತೀಶ್ ಪಿಕ್ಚರ್ ಹೌಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಭೀಮರಾವ್ ನಿರ್ದೇಶವಿದೆ.
ಚಿತ್ರದ ಕೆಲವು ತುಣುಕುಗಳನ್ನು ಚಿತ್ರತಂಡ ಬಿಡುಗಡೆಗೊಳಿಸಿತು. ಮೌನೇಶ್ ನಟರಂಗ, ಅನನ್ಯ ನಿಹಾರಿಕ, ಮಹಾದೇವ ಹಡಪದ, ಉಮಾ ವೈ.ಜಿ., ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ‘ಚಿತ್ರದ ನಾಯಕಿಗೆ ನಟ ಸುದೀಪ್ ಹಾಗೂ ಅವರ ಹೆಬ್ಬುಲಿ ಹೇರ್ಕಟ್ ಬಹಳ ಇಷ್ಟ. ಇದನ್ನರಿತ ನಾಯಕ ಆ ರೀತಿ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಮುಂದಾಗುತ್ತಾನೆ. ನಂತರದ ಘಟನೆಗಳು ಚಿತ್ರದ ಕಥಾಹಂದರ. ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶವೂ ಚಿತ್ರದಲ್ಲಿದೆ. ಮಾರ್ಚ್ 23ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಯಾಗಲಿದೆ.
‘ಸಾಮಾಜಿಕ ಅಸಮಾನತೆಯ ತಳಹದಿಯಲ್ಲಿ ಪ್ರೀತಿ, ದ್ವೇಷ ಮತ್ತು ಸಂಬಂಧಗಳನ್ನು ಅನ್ವೇಷಿಸುವ ಪ್ರಾಮಾಣಿಕ ಪ್ರಯತ್ನವಿದು. ಒಬ್ಬ ಶಾಲಾ ಹುಡುಗನ ಮುಗ್ಧತೆ ಮುಗುಳ್ನಗು ಹುಟ್ಟಿಸಿದರೆ, ಅವನಿರುವ ಸಮಾಜದ ವರ್ತನೆ ಗಂಟಲು ಬಿಗಿಯಾಗಿಸುತ್ತದೆ. ಉತ್ತರ ಕರ್ನಾಟಕದ ಈ ಕಥೆ ಹುಟ್ಟಿಸುವ ಪ್ರಶ್ನೆಗಳು ನಮ್ಮೆಲ್ಲರನ್ನೂ ಆತ್ಮಾವಲೋಕನಕ್ಕೆ ಒಡ್ಡುತ್ತವೆ’ ಎಂದಿದ್ದಾರೆ ಸತೀಶ್ ನೀನಾಸಂ. ‘ಡೇರ್ಡೆವಿಲ್ ಮುಸ್ತಾಫಾ’ ಚಿತ್ರದ ಚಿತ್ರಕಥೆ, ಸಂಭಾಷಣೆ ಬರೆದಿದ್ದ ಅನಂತ ಶಾಂದ್ರೇಯ ಈ ಸಿನಿಮಾಗೂ ಚಿತ್ರಕಥೆ ಬರೆದಿದ್ದಾರೆ. ದೀಪಕ್ ಯರಗೇರಾ ಛಾಯಾಚಿತ್ರಗ್ರಹಣ, ನವನೀತ್ ಶ್ಯಾಮ ‘ಹೆಬ್ಬುಲಿ ಕಟ್’ಗೆ ಸಂಗೀತ ಚಿತ್ರಕ್ಕಿದೆ.

Be the first to comment