ಗಮನ ಸೆಳೆಯುತ್ತಿದೆ ‘ಗರುಡ ಗಮನ, ವೃಷಭ ವಾಹನ’ ಟ್ರೈಲರ್

ಗಮನ ಸೆಳೆಯುತ್ತಿದೆ ‘ಗರುಡ ಗಮನ, ವೃಷಭ ವಾಹನ’ ಟ್ರೈಲರ್

ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ, ವೃಷಭ ವಾಹನ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಭಿನ್ನವಾಗಿರುವ ಟ್ರೈಲರ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ‘ಒಂದು ಮೊಟ್ಟೆಯ ಕತೆ’ ಸಿನಿಮಾದ ಮೂಲಕ ನಿರೀಕ್ಷೆ ಹುಟ್ಟಿಸಿರುವ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ಅವರು ಚಿತ್ರದ ಟ್ರೈಲರ್ ಮೂಲಕ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. ಅ.15ರಂದು ಬಿಡುಗಡೆ ಆಗಿರುವ ಟ್ರೈಲರ್ ಬಗ್ಗೆ ಪ್ರೇಕ್ಷಕರಿಂದ ದೊಡ್ಡಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಶಿವ ಹಾಗೂ ಹರಿ ಎನ್ನುವ ಇಬ್ಬರು ಸ್ನೇಹಿತರ ಕತೆ ಇಲ್ಲಿದೆ. ಮುಂಗೋಪ, ಹಿಂಸೆಗೆ ಹಿಂಜರಿಯದ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ, ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಹರಿ ಪೊಲೀಸ್ ಅಧಿಕಾರಿ ಆಗಿದ್ದು, ಗೆಳೆಯ ಶಿವ ಕೊಲೆಗಾರನಾಗಿರುವ ಬಗ್ಗೆ ಟ್ರೈಲರ್‌ನಲ್ಲಿ ಸುಳಿವಿದೆ. ಕತೆಯ ಕೆಲವು ಸುಳಿವುಗಳನ್ನಷ್ಟೇ ಟ್ರೈಲರ್ ಹೊಂದಿದ್ದು, ಪೂರ್ಣ ಕತೆಯನ್ನು ಆಸ್ವಾದಿಸಲು ಸಿನಿಮಾ ಬಿಡುಗಡೆವರೆಗೆ ಕಾಯಬೇಕಿದೆ.

ಕರಾವಳಿ ಭಾಗದ ಗ್ಯಾಂಗ್ ಸ್ಟರ್ ಕತೆಯನ್ನು ಸಿನಿಮಾ ಹೊಂದಿದ್ದು, ಕರಾವಳಿ ಸಂಸ್ಕೃತಿ ಇಲ್ಲಿ ಅನಾವರಣ ಆಗಿದೆ. ಟ್ರೈಲರ್‌ನಲ್ಲಿ ರಾಜ್ ಬಿ ಶೆಟ್ಟಿ ನಟನೆ ಗಮನ ಸೆಳೆಯುತ್ತಿದೆ. ನವೆಂಬರ್ 19ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಜೂನ್ ತಿಂಗಳಿನಲ್ಲಿಯೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಗಿದೆ.

ರಾಜ್ ಬಿ ಶೆಟ್ಟಿ ತಮ್ಮ ನಿರ್ದೇಶನದ ಎರಡನೇ ಸಿನಿಮಾವನ್ನು ಯಾವ ರೀತಿ ಕಥೆ ಪ್ರಸ್ತುತಪಡಿಸಲಿದ್ದಾರೆ ಎನ್ನುವ ಕುತೂಹಲ ಸಿನಿಮಾ ಪ್ರೇಮಿಗಳನ್ನು ಕಾಡಿದೆ. ಯಾವುದಕ್ಕೂ ಚಿತ್ರ ಬಿಡುಗಡೆವರೆಗೂ ಅಭಿಮಾನಿಗಳು ಕಾಯುವುದು ಅನಿವಾರ್ಯವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!