ಬಾದಾಮಿಯಲ್ಲಿ ‘ಗರಡಿ’ ಟೈಟಲ್ ಸಾಂಗ್ ಶೂಟಿಂಗ್

ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಚಿತ್ರದ ಟೈಟಲ್‌ ಹಾಡಿನ ಚಿತ್ರೀಕರಣ ಪ್ರವಾಸಿ ತಾಣ ಬಾದಾಮಿಯಲ್ಲಿ ಅದ್ಧೂರಿಯಾಗಿ ನಡೆದಿದೆ.

ಚಿತ್ರದಲ್ಲಿ ನಾಯಕನಾಗಿ ಯಶಸ್ ಸೂರ್ಯ ನಟಿಸುತ್ತಿದ್ದಾರೆ. ಯೋಗರಾಜ್‌ ಭಟ್‌ ನಿರ್ದೇಶಿಸಿದ್ದ ‘ಪಂಚತಂತ್ರ’ ಸಿನಿಮಾ ಮೂಲಕ ನಾಯಕಿಯಾಗಿ ಹೆಜ್ಜೆ ಇಟ್ಟಿದ್ದ ನಟಿ ಸೋನಲ್‌ ಮೊಂತೆರೋ ಚಿತ್ರದ ನಾಯಕಿ ಆಗಿದ್ದಾರೆ.

ಟೈಟಲ್‌ ಹಾಡಿನ ಚಿತ್ರೀಕರಣದಲ್ಲಿ ನಟ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರೂ ಭಾಗವಹಿಸಿದ್ದರು. ಗರಡಿ ಮನೆಯಲ್ಲಿ ತರಬೇತಿ ಪಡೆದಿರುವ ಕುಸ್ತಿಪಟುಗಳೂ ಹಾಡಿನ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿನ ಚಿತ್ರೀಕರಣ ಅಲ್ಲದೇ ನಾಯಕ ಸೂರ್ಯ, ನಾಯಕಿ ಸೋನಾಲ್ ನಡುವಿನ ಸಂಭಾಷಣೆಯ ದೃಶ್ಯಗಳ ಚಿತ್ರೀಕರಣವೂ ನಡೆದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಚಿತ್ರೀಕರಣ ಶೀಘ್ರದಲ್ಲೇ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರೂ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದು ‘ಸೋಮಣ್ಣ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮೊದಲು ರಚಿತಾ ರಾಮ್‌ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಕಾಲ್‌ಶೀಟ್‌ ಸಮಸ್ಯೆಯಿಂದಾಗಿ ರಚಿತಾ ಚಿತ್ರದಿಂದ ಹೊರ ನಡೆದಿದ್ದರು.

ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಬಿ.ಸಿ.ಪಾಟೀಲ್ ಪತ್ನಿ ವನಜಾ ಪಾಟೀಲ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ಬಂಡವಾಳ ಹೂಡಿದ್ದಾರೆ. ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ.

ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ(ಟಗರು), ರವಿಚೇತನ್, ತೇಜಸ್ವಿನಿ ಪ್ರಕಾಶ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!