ಖ್ಯಾತ ಚಿತ್ರ ನಿರ್ದೇಶಕ ಎಸ್ ನಾರಾಯಣ್ ವಿರುದ್ಧ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ದೂರು ದಾಖಲಾಗಿದೆ.
ಮಾವ ನಾರಾಯಣ್, ಪತಿ ಪವನ್ ವಿರುದ್ಧ ಪವಿತ್ರಾ ದೂರು ಕೊಟ್ಟಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದಲ್ಲಿ ಪವನ್ ಮೊದಲ ಆರೋಪಿ ಆಗಿದ್ದಾರೆ. ಎಸ್ ನಾರಾಯಣ್ A2 ಆರೋಪಿ ಆಗಿದ್ದಾರೆ.
ಪವಿತ್ರ ಹಾಗೂ ಎಸ್.ನಾರಾಯಣ್ ಪುತ್ರ ಪವನ್ 2021ರಲ್ಲಿ ಮದುವೆ ಆಗಿದ್ದಾರೆ. ಪವಿತ್ರಾ, ತನ್ನ ಪತಿ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ ಪತಿ ಪವನ್ ಓದಿಲ್ಲ. ಹೀಗಾಗಿ ಎಲ್ಲಿಯೂ ಕೆಲಸ ಸಿಗ್ತಿರಲಿಲ್ಲ. ನಾನೇ ಎಲ್ಲಾ ಕೆಲಸ ಮಾಡಿ ಮನೆಯ ಸಂಸಾರ ಸಾಗಿಸುತ್ತಿದ್ದೆ. ಇದರ ಮಧ್ಯೆ ‘ಕಲಾ ಸಾಮ್ರಾಟ್ ಟೀಂ ಅಕಾಡಮಿ’ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಮಾಡಲಾಗಿತ್ತು. ಅದನ್ನು ಆರಂಭಿಸಲು ಪವನ್ ಹಣ ಕೇಳಿದ್ದ. ಆಗ ನಾನು ತಾಯಿಯ ಒಡವೆಗಳನ್ನ ಅಡವಿಟ್ಟು ಹಣ ಕೊಟ್ಟಿದ್ದೆ. ಕೊನೆಗೆ ಆ ಸಂಸ್ಥೆ ಲಾಸ್ ಆಗಿ ಮುಚ್ಚಲಾಯಿತು.
ಅಲ್ಲಿ ಆಗಿರುವ ನಷ್ಟ ತುಂಬಿಸಿಕೊಳ್ಳಲು ನಾನು 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್ಗೆ ನೀಡಿದ್ದೆ. ಇಷ್ಟೆಲ್ಲ ಆದರೂ ಪ್ರತಿ ದಿನ ಅತ್ತೆ ಭಾಗ್ಯಲಕ್ಷ್ಮಿ, ಪತಿ ನನ್ನ ಮೇಲೆ ಹಲ್ಲೆ ನಡೆಸಿ ಹಣ ತರುವಂತೆ ಒತ್ತಾಯ ಮಾಡಿದ್ದಾರೆ. ಅದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಅತ್ತೆ ಭಾಗ್ಯಲಕ್ಷ್ಮಿ, ಪತಿ ನನ್ನ ಮನೆಯಿಂದ ಹೊರ ಹಾಕಿದ್ದಾರೆ ಎಂದು ದೂರಿನಲ್ಲಿ ಪವಿತ್ರ ಆರೋಪಿಸಿದ್ದಾರೆ.
—-





Be the first to comment