ಸ್ಯಾಂಡಲ್ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಟ, ನಿರ್ದೇಶಕ ಪ್ರೇಮ್ ನೀಡಿದ ದೂರಿನ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಫೆಬ್ರವರಿ 5ರಂದು ಚಲನಚಿತ್ರ ಬಿಡುಗಡೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಪ್ರೇಮ್ ಅವರನ್ನು ಗುರಿಯಾಗಿಸಿಕೊಂಡು ಕನಕಪುರ ಶ್ರೀನಿವಾಸ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಗೌರವಕ್ಕೆ ಧಕ್ಕೆ ತರುವಂತೆ ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮೊದಲಿಗೆ ಎನ್ಸಿಆರ್ ದಾಖಲಿಸಿಕೊಂಡು, ನಂತರ ನ್ಯಾಯಾಲಯದ ಅನುಮತಿ ಪಡೆದು ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣವನ್ನು ಸೆಕ್ಷನ್ 352ರಡಿ ದಾಖಲಿಸಲಾಗಿದ್ದು, ಸಾರ್ವಜನಿಕ ಶಾಂತಿಗೆ ಭಂಗ ತರುವುದು ಅಥವಾ ಉದ್ದೇಶಪೂರ್ವಕವಾಗಿ ಅವಮಾನಿಸುವುದು ಎಂಬ ಆರೋಪವನ್ನು ಒಳಗೊಂಡಿದೆ.
ಇದೇ ವೇಳೆ ‘ಅಪ್ಪು ಬಗ್ಗೆ ಕನಕಪುರ ಶ್ರೀನಿವಾಸ್ ಮಾತನಾಡಿದ್ದಕ್ಕೆ ಕ್ಷಮಿಸುವ ಪ್ರಶ್ನೆಯೇ ಇಲ್ಲ’ಎಂದು ನಟ ಶ್ರೀಮುರಳಿ ಹೇಳಿದ್ದಾರೆ.
‘ಕನಕಪುರ ಶ್ರೀನಿವಾಸ ಮಾತುಗಳು ಬೇಜವಾಬ್ದಾರಿಯುತವಾಗಿವೆ. ನಿರ್ಮಾಪಕರನ್ನು ಅನ್ನದಾತರಂತೆ ಕಾಣುತ್ತಿದ್ದೇವೆ. ಇಂದಿಗೂ ಅದೇ ಗೌರವವಿದೆ. ಆದರೆ ಕಲಾವಿದರ ಬಳಿ ಕೆಲಸ ಮಾಡಿಸಿಕೊಂಡು, ವರ್ಷಗಳ ಕಾಲ ಜೊತೆಯಲ್ಲಿ ಕೆಲಸ ಮಾಡಿ, ಊಟ ಮಾಡಿ, ನಂತರ ಯಾವುದೋ ಒಂದು ಘಟನೆ ಹಿಡಿದುಕೊಂಡು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಹಿರಿಯ ಸ್ಥಾನದಲ್ಲಿರುವವರು ಸ್ವಲ್ಪ ಸಂಯಮದಿಂದ ಮಾತನಾಡಬೇಕು. ಕರ್ನಾಟಕದ ಅನೇಕ ಜನರ ಬಗ್ಗೆ ತಪ್ಪಾಗಿ ಮಾತನಾಡಲಾಗಿದೆ, ಕೇಳಲು ಕೂಡ ತಪ್ಪಾಗಿ ಅನಿಸುತ್ತಿದೆ. ಈ ಸಮಸ್ಯೆಯನ್ನು ಇಂಡಸ್ಟ್ರಿಯ ಹಿರಿಯರು ಮುಂದೆ ಬಂದು ಬಗೆಹರಿಸಬೇಕು. ನಾವೆಲ್ಲರೂ ಒಂದೇ ಕುಟುಂಬ ಎಂದು ಶ್ರೀಮುರಳಿ ಹೇಳಿದ್ದಾರೆ.
—-





Be the first to comment