ಗುರುಪ್ರಸಾದ್ ಅವರ ಕೊನೆಯ ಚಿತ್ರ ‘ಎದ್ದೇಳು ಮಂಜುನಾಥ 2’ ಫೆಬ್ರುವರಿ 21 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
‘ಕಿತ್ತೋದ ಪ್ರೇಮ’ ಹಾಡಿನ ಬಿಡುಗಡೆಯ ನಂತರ ಚಿತ್ರತಂಡ ಇದೀಗ ಮೊದಲ ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಬದಲು, ಟೀಸರ್ಗಳ ರೂಪದಲ್ಲಿ ಚಿತ್ರದ ತುಣುಕುಗಳನ್ನು ಹೊರತರಲು ಚಿತ್ರತಂಡ ನಿರ್ಧರಿಸಿದೆ.
ಎದ್ದೇಳು ಮಂಜುನಾಥ 2 ಚಿತ್ರದಲ್ಲಿ ನಾಯಕನಾಗಿ ಗುರುಪ್ರಸಾದ್ ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ರಚಿತಾ ಮಹಾಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ರಂಗನಾಯಕದಲ್ಲಿಯೂ ರಚಿತಾ ನಾಯಕಿಯಾಗಿದ್ದರು. ಚಿತ್ರದ ತಾರಾಗಣದಲ್ಲಿ ಶರತ್ ಲೋಹಿತಾಶ್ವ, ಚೈತ್ರಾ ಆಚಾರ್, ವಿಘ್ನೇಶ್ ಕತ್ತಿ ಮುಂತಾದವರು ಇದ್ದಾರೆ.
ಮೈಸೂರು ರಮೇಶ್ ನಿರ್ಮಾಣದ ಎದ್ದೇಳು ಮಂಜುನಾಥ 2 ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತವಿದೆ. ಅಶೋಕ್ ಸಾಮ್ರಾಟ್ ಅವರ ಛಾಯಾಗ್ರಹಣವಿದೆ.
ಎದ್ದೇಳು ಮಂಜುನಾಥ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಗುರುಪ್ರಸಾದ್ ಎದ್ದೇಳು ಮಂಜುನಾಥ 2 ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನವೇ ನಿರ್ದೇಶಕರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಿರ್ಮಾಪಕರು ಬಾಕಿ ಉಳಿದಿದ್ದ ಕಾರ್ಯಗಳನ್ನು ಪೂರ್ಣಗೊಳಿಸಿ ಯೋಜನೆಯನ್ನು ತೆರೆಗೆ ತರಲು ಹರಸಾಹಸ ಪಟ್ಟಿದ್ದಾರೆ.

Be the first to comment