ತಮ್ಮ ವಿರುದ್ದ ಕೇಳಿ ಬರುತ್ತಿರುವ ಟ್ರೋಲ್ ಗಳಿಗೆ ನಟ ಡಾಲಿ ಧನಂಜಯ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
‘ಆಚರಣೆಗಳು ನಮ್ಮ ಹಿರಿಯರಿಗೆ ಖುಷಿ ಕೊಡುವಂತಹ ನಂಬಿಕೆಗಳು ಎಂದಾಗ ಪಾಲಿಸುವುದರಲ್ಲಿ ಏನೋ ತಪ್ಪು ಇದೆ ಎಂದು ನನಗೆ ಅನಿಸುತ್ತಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ನನಗೆ ಬರಲ್ಲ. ಆದರೆ ಒಂದು ಘಟನೆ ಬಗ್ಗೆ ಹೇಳುತ್ತೇನೆ. ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಬಂದಾಗ ಕಾಯುವಂತಹ ನಂಬಿಕೆಗಳು ಬೇರೆ, ಮೂಢ ನಂಬಿಕೆಗಳು ಬೇರೆ. ಮೌಢ್ಯವನ್ನು ನಾವು ಖಂಡಿತ ವಿರೋಧಿಸಬೇಕು’ ಎಂದು ಡಾಲಿ ತಮ್ಮ ನಿಲುವು ಸಮರ್ಥಿಸಿಕೊಂಡಿದ್ದಾರೆ.
ಡಾಲಿ ದೇಗುಲ ಸೆಟ್ ನಲ್ಲಿ ಮದುವೆಯಾಗಿದ್ದಕ್ಕೆ ವ್ಯಾಪಕ ಟ್ರೋಲ್ ಗಳು ಎದುರಾಗಿದ್ದವು. ಫೆಬ್ರವರಿ 15, 16ರಂದು ನಡೆದ ವಿವಾಹ ಸಮಾರಂಭದಲ್ಲಿ ಅನೇಕ ಆಚರಣೆಗಳನ್ನು ಧನಂಜಯ ಪಾಲಿಸಿದ್ದಾರೆ. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿದ್ದರು.
‘ಆಚರಣೆಯಲ್ಲಿ ತುಂಬ ರೀತಿಯ ಆಚರಣೆಗಳು ಇವೆ. ಕೆಂಡ ಹಾಯುವಾಗ ಚಿಕ್ಕಪ್ಪ ಒಂದು ಪೂಜೆ ಮಾಡಿದರು. ನನಗೆ ಅದರ ಬಗ್ಗೆ ಗೊತ್ತಿಲ್ಲ. ಅದು ಮಡಿವಾಳ ಪದ್ಧತಿಯಲ್ಲಿ ಮಾಡುವುದು ಅಂತ ಕೆಲವರು ಹೇಳಿದರು. ಅದನ್ನು ತಮ್ಮ ಚಿಕ್ಕಪ್ಪ ತುಂಬ ಚೆನ್ನಾಗಿ ಮಾಡಿದರು. ಕೆಂಡ ಹಾಯುವುದನ್ನು ನಾನು ಚಿಕ್ಕ ವಯಸ್ಸಿನಿಂದ ಜಾತ್ರೆಯಲ್ಲಿ ನೋಡಿಕೊಂಡು ಬಂದಿದ್ದೇನೆ. ಅದು ನನಗೆ ಜನಪದ. ಆ ಪ್ರಕ್ರಿಯೆಯನ್ನು ಒಂದು ಮಗು ರೀತಿ ನಾನು ಎಂಜಾಯ್ ಮಾಡಿದ್ದೇನೆ. ಅವುಗಳಲ್ಲಿ ನನಗೆ ತಪ್ಪು ಕಂಡಿಲ್ಲ’ ಎಂದು ಡಾಲಿ ಹೇಳಿದ್ದಾರೆ.
‘ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ನನ್ನ ಜೀವನದ ಉದಾಹರಣೆಯನ್ನೇ ಕೊಡುತ್ತೇನೆ. ನನ್ನ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಒಂದು ಸಣ್ಣ ಸರ್ಜರಿ ಇತ್ತು. ನನಗೆ ಮತ್ತು ವೈದ್ಯರಿಗೆ ವಿಜ್ಞಾನ ಗೊತ್ತು. ಆದರೆ ಆಪರೇಷನ್ ಥಿಯೇಟರ್ಗೆ ಹೋಗುವಾಗ ನನ್ನ ತಾಯಿ ಜೇನುಕಲ್ಲು ಸಿದ್ದಪ್ಪ ಅಂತ ಕೈ ಮುಗಿಯುತ್ತಾರೆ. ಅವರಿಗೆ ಜೇನುಕಲ್ಲು ಸಿದ್ಧಪ್ಪ ಒಂದು ಶಕ್ತಿ. ಅವರ ನಂಬಿಕೆ ಮತ್ತು ಶಕ್ತಿಯನ್ನು ನಾನು ಗೌರವಿಸಬೇಕು. ಎಲ್ಲದರಲ್ಲೂ ತಪ್ಪು ಹುಡುಕಿದರೆ ನಾವು ಒಟ್ಟಿಗೆ ಸೇರೋಕೆ ಆಗಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.
ನಾನು ಈಗ ಮಾತನಾಡಲು ಹೋದರೆ ಮದುವೆ ಬಿಟ್ಟು ಬೇರೆ ಬೇರೆ ಚರ್ಚೆ ಶುರುವಾಗುತ್ತದೆ. ನನ್ನನ್ನು ಪ್ರಶ್ನೆ ಮಾಡುತ್ತಿರುವವರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಕೂಡ ಇರಲಿ. ನಾನು ಇನ್ನೂ ಕಲಿಯುತ್ತಾ ಇರುತ್ತೇನೆ, ಬೆಳೆಯುತ್ತಾ ಇರುತ್ತೇನೆ. ಅನುಭವಗಳಿಂದ ಹೊರಗೆ ಉಳಿಯೋಕೆ ನನಗೆ ಆಗಲ್ಲ. ನಾನೊಬ್ಬ ಕಲಾವಿದ. ನನಗೆ ಎಲ್ಲ ಅನುಭವಗಳು ತುಂಬ ಮುಖ್ಯ’ ಎಂದು ಹೇಳಿದ್ದಾರೆ.

Be the first to comment